ಚನ್ನಪಟ್ಟಣ: ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ದಿವಂಗತ ಸೈನಿಕರೊಬ್ಬರ ಕುಟುಂಬಕ್ಕೆ ಆರೋಪಿಗಳು ಜೀವ ಬೆದರಿಕೆ ಹಾಕುತ್ತಿದ್ದು ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿರುವ ಘಟನೆ ಚನ್ನಪಟ್ಟಣ ತಾಲ್ಲೂಕಿನ ಕನ್ನಮಂಗಲದಿಂದ ವರದಿಯಾಗಿದೆ.
ಪ್ರಾಣ ಬೆದರಿಕೆ ಎದುರಿಸುತ್ತಿರುವ ತಾಲ್ಲೂಕಿನ ಕನ್ನಮಂಗಲದ ದಿವಂಗತ ಸೈನಿಕ ರಾಮು ಅವರ ಪತ್ನಿ ವೆಂಕಟಮ್ಮ ಶನಿವಾರ ತಮ್ಮ ತೋಟದ ಮನೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಪ್ರಕರಣವನ್ನು ಪತ್ರಕರ್ತರಿಗೆ ವಿವರಿಸಿ ಕೂಡಲೇ ತಮಗೆ ಸೂಕ್ತ ರಕ್ಷಣೆ ಒದಗಿಸುವಂತೆ ಕೋರಿದರು.
ಈ ಕುರಿತಂತೆ ವೆಂಕಟಮ್ಮ ಮಾಧ್ಯಮದವರಿಗೆ ಅಗತ್ಯ ದಾಖಲೆ ಗಳನ್ನು ವಿತರಿಸಿದರು. ಸಂಬಂಧಪಟ್ಟವರು ತಕ್ಷಣ ರಕ್ಷಣೆ ನೀಡಿ ನ್ಯಾಯ ಒದಗಿಸಿಕೊಡಬೇಕು. ಇಲ್ಲದಿದ್ದರೆ ನಮ್ಮ ಕುಟುಂಬ ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡಬೇಕಾಗುತ್ತದೆ ಅವರು ಎಚ್ಚರಿಸಿದರು.