ಬೆಂಗಳೂರು: ಜ್ಞಾನಭಾರತಿ ಠಾಣಾ ವ್ಯಾಪ್ತಿಯ ಮರಿಯಪ್ಪನಪಾಳ್ಯದಲ್ಲಿ ಮಂಗಳವಾರ ರಾತ್ರಿ ರೌಡಿ ವಾಸು ಅಲಿಯಾಸ್ ಅಂದ್ರಹಳ್ಳಿ ವಾಸು ಬಲಗಾಲಿಗೆ ಸಿಸಿಬಿ ಇನ್ಸ್ಪೆಕ್ಟರ್ ಮಂಜುನಾಥ್ ಸರ್ವಿಸ್ ರಿವಾಲ್ವಾರ್ನಿಂದ ಗುಂಡು ಹೊಡೆದಿದ್ದಾರೆ.
ಅಂದ್ರಹಳ್ಳಿ ನಿವಾಸಿಯಾದ ವಾಸು ವಿರುದ್ಧ ಬ್ಯಾಡ್ರಹಳ್ಳಿ ಹಾಗೂ ರಾಜಗೋಪಾಲನಗರ ಠಾಣೆಗಳಲ್ಲಿ ಕೊಲೆ, ಕೊಲೆ ಯತ್ನ, ದರೋಡೆ ಹಾಗೂ ಹಲ್ಲೆ ಆರೋಪದಡಿ 10 ಪ್ರಕರಣಗಳು ದಾಖಲಾಗಿದ್ದವು. ಒಂದೂವರೆ ವರ್ಷದಿಂದ ತಲೆಮರೆಸಿಕೊಂಡು ನಗರದಲ್ಲೇ ತಿರುಗಾಡುತ್ತಿದ್ದ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು.
ವಾಸು ಮೇಲೆ ನಿರಂತರವಾಗಿ ನಿಗಾ ಇಟ್ಟಿದ್ದೆವು. ಮರಿಯಪ್ಪನಪಾಳ್ಯದಲ್ಲಿ ಆರೋಪಿ ಇರುವ ಬಗ್ಗೆ ಖಚಿತ ಮಾಹಿತಿ ಸಿಕ್ಕಿತ್ತು. ಮಂಜುನಾಥ್ ನೇತೃತ್ವದ ಪೊಲೀಸರು ತಂಡವು ಸ್ಥಳಕ್ಕೆ ತೆರಳಿತ್ತು ಎಂದು ಅಧಿಕಾರಿಗಳು ಕಾರ್ಯಾಚರಣೆಯನ್ನು ವಿವರಿಸಿದರು.
‘ಸಿಬ್ಬಂದಿಯನ್ನು ಕಂಡ ಕೂಡಲೇ ವಾಸು ಪರಾರಿಯಾಗಲು ಮುಂದಾಗಿದ್ದ. ಈ ವೇಳೆ ಆತನನ್ನು ಸಿಬ್ಬಂದಿಯ ತಂಡ ಸುತ್ತವರಿಯಿತು. ಶರಣಾಗಲು ಸೂಚಿಸಿದ್ದರೂ ಆರೋಪಿ ಚಾಕುವಿನಿಂದ ಕಾನ್ಸ್ಟೇಬಲ್ ಉಮೇಶ್ ಕೈಗೆ ಇರಿದಿದ್ದ. ಈ ಹಂತದಲ್ಲಿ ಆತ್ಮರಕ್ಷಣೆಗಾಗಿ ಆತನ ಕಾಲಿಗೆ ಮಂಜುನಾಥ್ ಗುಂಡು ಹೊಡೆದಿದ್ದಾರೆ’ ಎಂದು ಮಾಹಿತಿ ನೀಡಿದರು.