ಬೆಂಗಳೂರು: ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆದಿರುವ ವಿದ್ಯುತ್ ಖರೀದಿ ಅವ್ಯವಹಾರ ಕುರಿತು ಪರಿಶೀಲಿಸುತ್ತಿರುವ ಸದನ ಸಮಿತಿ ಅಧ್ಯಕ್ಷ, ಇಂಧನ ಸಚಿವ ಡಿ.ಕೆ.ಶಿವಕುಮಾರ್, ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರನ್ನು ಶುಕ್ರವಾರ ಭೇಟಿ ಮಾಡಿ ಕೆಲಹೊತ್ತು ಮಾತುಕತೆ ನಡೆಸಿದರು.
ಸದನ ಸಮಿತಿಯ ಸದಸ್ಯ ಸ್ಥಾನಕ್ಕೆ ಕುಮಾರಸ್ವಾಮಿ ರಾಜೀನಾಮೆ ನೀಡಿದ್ದರೂ ಅದು ಅಂಗೀಕಾರ ಆಗಿರಲಿಲ್ಲ. ಸಮಿತಿಯ ಕೊನೆ ಸಭೆ ಇದೇ 30ರಂದು ನಡೆಯಲಿದೆ. ಈ ಸಭೆಯಲ್ಲಿ ಸಮಿತಿ ವರದಿ ಅಂತಿಮಗೊಳ್ಳಲಿದೆ. ಸದಸ್ಯರಾಗಿ ಮುಂದುವರಿದಿರುವುದರಿಂದ ವರದಿಗೆ ಕುಮಾರಸ್ವಾಮಿ ಸಹಿಯೂ ಅಗತ್ಯವಾಗಿದೆ.
ವರದಿಯ ಕರಡು ಪ್ರತಿ ಬಗ್ಗೆ ಕುಮಾರಸ್ವಾಮಿ ಜೊತೆ ಮಾತುಕತೆ ನಡೆಸಿದ ಶಿವಕುಮಾರ್, ಅಂತಿಮ ಸಭೆಯಲ್ಲಿ ಭಾಗವಹಿಸುವಂತೆ, ವರದಿಗೆ ಸಹಿ ಹಾಕುವಂತೆ ಮನವಿ ಮಾಡಿದರು. ಅದಕ್ಕೆ ಕುಮಾರಸ್ವಾಮಿ ಒಪ್ಪಿಗೆ ಸೂಚಿಸಿದರು. ಬೆಳಗಾವಿಯಲ್ಲಿ ನಡೆಯಲಿರುವ ವಿಧಾನಮಂಡಲ ಅಧಿವೇಶನದಲ್ಲಿ ಸಮಿತಿ ವರದಿ ಮಂಡನೆ ಯಾಗಲಿದೆ.