ಬೆಂಗಳೂರು: ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣಕ್ಕೆ ಬುಧವಾರ ಬಿಳಿ ಗೂಬೆಯೊಂದು ಬಂದಿತ್ತು. ಆಹಾರ ಮತ್ತು ನೀರಿಲ್ಲದೇ ಬಳಲಿದ್ದ ಪಕ್ಷಿಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ವನ್ಯಜೀವಿ ಸಂರಕ್ಷಕರ ತಂಡ ರಕ್ಷಿಸಿದೆ.
ಗೂಬೆಯನ್ನು ನೋಡುತ್ತಿದ್ದಂತೆ ವಿಧಾನಸೌಧದ ಸಿಬ್ಬಂದಿ ಬಿಬಿಎಂಪಿ ವನ್ಯಜೀವಿ ಸಂರಕ್ಷಕರ ತಂಡಕ್ಕೆ ಮಾಹಿತಿ ನೀಡಿದರು. ತಕ್ಷಣ ಅಲ್ಲಿಗೆ ಬಂದ ವನ್ಯಜೀವಿ ಸಂರಕ್ಷಕ ಕಿರಣ್ಕುಮಾರ್, ಗೂಬೆಯನ್ನು ರಕ್ಷಿಸಿ ಕೊಂಡೊಯ್ದರು. ಪಕ್ಷಿಯನ್ನು ಚಿಕಿತ್ಸೆಗಾಗಿ ಪಾಲಿಕೆಯ ವನ್ಯಜೀವಿ ಸಂರಕ್ಷಣಾ ಘಟಕದಲ್ಲಿ ಇರಿಸಲಾಗಿದೆ.
ಈ ಕುರಿತು ‘ಪ್ರಜಾವಾಣಿ’ ಜೊತೆ ಮಾತನಾಡಿದ ಮುಖ್ಯ ವನ್ಯಜೀವಿ ಸಂರಕ್ಷಕ ಶರತ್ ಬಾಬು, ‘ನಗರ ಪ್ರದೇಶದಲ್ಲಿ ಬೇಸಿಗೆಯ ದಿನಗಳಲ್ಲಿ ಪಕ್ಷಿಗಳು ಆಹಾರ ಮತ್ತು ನೀರಿಲ್ಲದೇ ಬಳಲುವುದು ಸಾಮಾನ್ಯ. ಮಂಗಳವಾರ ಕೋರಮಂಗಲದಲ್ಲಿ ಒಂದು ಗೂಬೆಯನ್ನು ರಕ್ಷಿಸಲಾಗಿತ್ತು.
ಬುಧವಾರ ವಿಧಾನಸೌಧದಲ್ಲಿ ರಕ್ಷಿಸಿರುವ ಗೂಬೆಯು ಬಳಲಿದ್ದು, ಚಿಕಿತ್ಸೆ ನೀಡಿ ಅದನ್ನು ಕಾಡಿಗೆ ಬಿಡಲಾಗುವುದು’ ಎಂದು ತಿಳಿಸಿದರು.