ಪೀಣ್ಯ ದಾಸರಹಳ್ಳಿ: `ಒಳ ಚರಂಡಿಯ ಅವ್ಯವಸ್ಥೆ ಮತ್ತು ಅಸಮರ್ಪಕ ನಿರ್ವಹಣೆಯಿಂದಾಗಿ ಸಾವು-ನೋವುಗಳು ಸಂಭವಿಸುತ್ತಿದ್ದವು. ಈ ಸಮಸ್ಯೆಯನ್ನು ಪರಿಹರಿಸಲು ವೈಜ್ಞಾನಿಕವಾಗಿ ಒಳಚರಂಡಿಗಳನ್ನು ನಿರ್ಮಿಸಲಾಗುವುದು~ ಎಂದು ಗೃಹ ಸಚಿವ ಆರ್.ಅಶೋಕ್ ಹೇಳಿದರು.
ದಾಸರಹಳ್ಳಿ ಕ್ಷೇತ್ರ ವ್ಯಾಪ್ತಿಯ ಹೆಗ್ಗನಹಳ್ಳಿ ಬಸ್ ನಿಲ್ದಾಣದ ಮೈದಾನದಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ವತಿಯಿಂದ ರೂ 55 ಕೋಟಿ ವೆಚ್ಚದ ಒಳಚರಂಡಿ ಕಾಮಗಾರಿಗಳ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಶಾಸಕ ಎಸ್.ಮುನಿರಾಜು, `ಕ್ಷೇತ್ರದ ಬಡಜನರಿಗೆ ಶೀಘ್ರವೇ ಹಕ್ಕು ಪತ್ರಗಳನ್ನು ವಿತರಿಸಲಾಗುವುದು. ಬರುವ ದಿನಗಳಲ್ಲಿ ಎಲ್ಲ ರೀತಿಯ ನಾಗರಿಕ ಸೌಕರ್ಯಗಳನ್ನೂ ಒದಗಿಸಲಾಗುವುದು~ ಎಂದು ಭರವಸೆ ನೀಡಿದರು.
ಪಾಲಿಕೆ ಸದಸ್ಯ ಎಂ.ಬಿ.ಗೋವಿಂದೇಗೌಡ ಅಧ್ಯಕ್ಷತೆ ವಹಿಸಿದ್ದರು. ಸಂಸದ ಡಿ.ಬಿ.ಚಂದ್ರೇಗೌಡ, ಮೇಯರ್ ಪಿ.ಶಾರದಮ್ಮ, ಪಾಲಿಕೆ ಸದಸ್ಯರಾದ ಎಚ್.ಎನ್.ಗಂಗಾಧರ್, ಕೆ.ಎಲ್.ತಿಮ್ಮನಂಜಯ್ಯ, ಬಿ.ಆರ್. ಚಂದ್ರಶೇಖರ್, ಪುಟ್ಟಮ್ಮ ತಮ್ಮಣ್ಣ, ಲಕ್ಷ್ಮೀಕಾಂತ್ ರೆಡ್ಡಿ ಹಾಗೂ ಇತರರು ಹಾಜರಿದ್ದರು.