ಬೆಂಗಳೂರು: ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣದ ಬೆನ್ನಲ್ಲೇ, ವಿದ್ಯಾರ್ಥಿಗಳ ಸುರಕ್ಷತಾ ಕ್ರಮಗಳನ್ನು ಬಿಗಿಗೊಳಿಸುವ ನಿಟ್ಟಿನಲ್ಲಿ ವಿಬ್ಗಯೊರ್ ಶಾಲಾ ಆಡಳಿತ ಮಂಡಳಿ ಹೊರಡಿಸಿರುವ ಹೊಸ ಮಾರ್ಗಸೂಚಿಗಳಿಗೆ ಪೋಷಕರಿಂದ ಭಾರಿ ವಿರೋಧ ವ್ಯಕ್ತವಾಗಿವೆ.
ಬುಧವಾರ (ಜು.30) ತರಗತಿಗಳು ಪುನರಾರಂಭವಾದ ತರುವಾಯ ಶಾಲೆ 12 ಅಂಶಗಳಿರುವ ಮಾರ್ಗಸೂಚಿ ಪ್ರತಿಯನ್ನು ಪೋಷಕರಿಗೆ ನೀಡಿದ್ದು, ಅದರಲ್ಲಿರುವ ಕೆಲ ಅಂಶಗಳಿಗೆ ಪೋಷಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮಾರ್ಗಸೂಚಿಯಲ್ಲಿನ ಕೆಲ ಅಂಶಗಳು ಮಕ್ಕಳ ಸುರಕ್ಷತೆಯ ವಿಚಾರದಲ್ಲಿ ತಮ್ಮನ್ನೇ ಹೆಚ್ಚು ಹೊಣೆಯಾಗಿಸಿರುವುದಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಶಾಲೆಗೆ ಭೇಟಿ ನೀಡುವಾಗ ಪೋಷಕರು ಕಡ್ಡಾಯವಾಗಿ ಸರ್ಕಾರ ನೀಡಿರುವ ಅಧಿಕೃತ ಗುರುತಿನ ಪತ್ರ ತರಬೇಕು. ‘ಸಹಾಯಕ ಶಿಕ್ಷಕ’ರ ಪೂರ್ವಾಪರ ಪರಿಶೀಲನೆ ಪಾಲಕರ ಹೊಣೆ, ಇ–ಮೇಲ್ ಮೂಲಕ ದೂರು ಕಳುಹಿಸಿ, ಎಂಬಂಥ ಅಂಶಗಳು ಸೇರಿ ಹಲವು ನಿಯಮಕ್ಕೆ ಪ್ರತಿರೋಧ ತೋರಿದ್ದಾರೆ.
ಹೊಸ ಮಾರ್ಗಸೂಚಿ: ಶಾಲೆ (ಬೆಳಿಗ್ಗೆ 8.10 ರಿಂದ ಮಧ್ಯಾಹ್ನ 3.10) ಅವಧಿಯಲ್ಲಿ ಶಾಲೆಗೆ ಭೇಟಿ ನೀಡುವ ಪೋಷಕರು ಪ್ರಾಂಶುಪಾಲರು ಅಥವಾ ಸಂಬಂಧಪಟ್ಟ ಸಿಬ್ಬಂದಿಯಿಂದ ಪೂರ್ವಾನುಮತಿ ಪಡೆಯಬೇಕು.4ಪೂರ್ವಾನುಮತಿ ಪಡೆದು ಶಾಲೆಗೆ ಭೇಟಿ ನೀಡುವ ಪೋಷಕರು ತಪ್ಪದೆ ತಮ್ಮೊಂದಿಗೆ ಸರ್ಕಾರದ ಯಾವುದಾದರೂ ಅಧಿಕೃತ ಗುರುತಿನ ಪತ್ರ ಮತ್ತು ತಮ್ಮ ಮಕ್ಕಳ ನೋಂದಣಿ ಸಂಖ್ಯೆಯನ್ನು ಭದ್ರತಾ ಸಿಬ್ಬಂದಿಗೆ ತೋರಿಸಬೇಕು.
ತುರ್ತು ಸಂದರ್ಭಗಳನ್ನು ಹೊರತುಪಡಿಸಿ ಮಕ್ಕಳನ್ನು ಯಾವುದೇ ರೀತಿಯಲ್ಲಿ ಶಾಲೆಯಿಂದ ಬೇಗನೆ ಕಳುಹಿಸಲು ಮತ್ತು ಅರ್ಧ ದಿನದ ರಜೆ ನೀಡಲು ಅನುಮತಿ ನೀಡುವುದಿಲ್ಲ.ಒಂದೊಮ್ಮೆ ಪೋಷಕರು ತಮ್ಮ ಮಕ್ಕಳನ್ನು ತಡವಾಗಿ ಶಾಲೆಗೆ ಕಳುಹಿಸಲು ನಿರ್ಧರಿಸಿದ್ದರೆ, ಅದಕ್ಕೆ ಪೂರ್ವಾನುಮತಿ ಪಡೆಯಬೇಕು.ವಿಶೇಷ ಮಕ್ಕಳಿಗಾಗಿ ನಿಯೋಜಿಸಿಕೊಂಡಿರುವ ಸಹಾಯಕ ಶಿಕ್ಷಕರಿಲ್ಲದೆ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಬಾರದು. ಅಂತಹ ಶಿಕ್ಷಕರ ಪೂರ್ವಾಪರಗಳನ್ನು ಪರಿಶೀಲಿಸುವುದು ಪೋಷಕರ ಜವಾಬ್ದಾರಿ. ಸಹಾಯಕ ಶಿಕ್ಷಕರ ಕುರಿತು ಪೋಷಕರು ಆಗಸ್ಟ್ 31ರ ಒಳಗೆ ಶಾಲೆಯ ಆಪ್ತಸಮಾಲೋಚಕರಿಗೆ ಮಾಹಿತಿ ಒದಗಿಸಬೇಕು. ಪಾಲಕರ ಮತ್ತು ಶಿಕ್ಷಕರ ಸಭೆಗೆ (ಪಿಟಿಎಂ) ಪೋಷಕರು ತಪ್ಪದೆ ಹಾಜರಾಗಬೇಕು.
ಮಕ್ಕಳ ಅನಾರೋಗ್ಯ ಕುರಿತಂತೆ ಶಾಲೆ ಮಾಹಿತಿ ನೀಡಿದರೆ ಪೋಷಕರು ವಿಳಂಬ ಮಾಡದೆ ಅವರನ್ನು ಕರೆದುಕೊಂಡು ಹೋಗಬೇಕು. ಶಾಲೆಗೆ ಭೇಟಿ ನೀಡುವ ಪೋಷಕರು ಸಭ್ಯ ಉಡುಪು ಧರಿಸಬೇಕು. ಶಾಲೆಯ ಮತ್ತು ಭದ್ರತಾ ಸಿಬ್ಬಂದಿಯೊಂದಿಗೆ ಸೌಜನ್ಯದಿಂದ ವರ್ತಿಸಬೇಕು.ಮಕ್ಕಳ ದಿನಚರಿ ಪುಸ್ತಕವನ್ನು ಪಾಲಕರು ನಿತ್ಯವು ಪರಿಶೀಲಿಸಬೇಕು.
ರಜಾ ಚೀಟಿಯನ್ನು ಮಕ್ಕಳ ದಿನಚರಿಯೊಂದಿಗೆ ಕಳುಹಿಸಬೇಕು. ದೀರ್ಘಕಾಲ ರಜೆ ಬೇಕಾದರೆ ಶಾಲಾ ಸಂಯೋಜಕರು ಅಥವಾ ಮುಖ್ಯಸ್ಥರಿಂದ ಮೊದಲು ಅನುಮತಿ ಪಡೆಯಬೇಕು.
ಶಾಲೆಗೆ ಸಂಬಂಧಿತ ಯಾವುದೇ ಸಮಸ್ಯೆಗಳಿದ್ದರೆ ಪೋಷಕರು ಪೂರ್ವಾನುಮತಿ ಪಡೆದು ಮಂಗಳವಾರ ಮತ್ತು ಗುರುವಾರ ಮಧ್ಯಾಹ್ನ 3.30 ರಿಂದ ಸಂಜೆ 4.30ರ ಒಳಗೆ ಪ್ರಾಂಶುಪಾಲರು ಅಥವಾ ಉಪ ಪ್ರಾಂಶುಪಾಲರನ್ನು ಮುಕ್ತವಾಗಿ ಭೇಟಿ ಮಾಡಬಹುದು.4ಒಂದೊಮ್ಮೆ ತಮ್ಮ ಯಾವುದೇ ಸಮಸ್ಯೆಗೆ ಸಿಬ್ಬಂದಿಯಿಂದ ಪರಿಹಾರ ದೊರೆಯದಿದ್ದಾಗ ಪೋಷಕರು ಶಾಲೆಯ ನಿರ್ದೇಶಕರಿಗೆ ಇ–ಮೇಲ್ ಮೂಲಕ ದೂರು ಕಳುಹಿಸಬಹುದು. ದೂರಿನ ಒಂದು ಪ್ರತಿಯನ್ನು ಪ್ರಾಂಶುಪಾಲರಿಗೂ ಕಳುಹಿಸಬೇಕು.ಶಾಲೆಗೆ ಮಕ್ಕಳನ್ನು ಕರೆತರುವ ಮತ್ತು ಕರೆದೊಯ್ಯುವ ಪೋಷಕರು ಗುರುತಿನ ಚೀಟಿ ಪಡೆಯಲು ತಮ್ಮ ಬಗೆಗಿನ ಮಾಹಿತಿ ಒದಗಿಸಬೇಕು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.