ಬೆಂಗಳೂರು: ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಾಗಿ ಹಲಸೂರು ಗೇಟ್ ಬಳಿ ಕಾರ್ಯನಿರ್ವಹಿಸುತ್ತಿದ್ದ ಮಹಿಳಾ ಠಾಣೆಯನ್ನು ಶಿವಾಜಿನಗರಕ್ಕೆ ಸ್ಥಳಾಂತರ ಮಾಡಲಾಗಿದೆ.
ಸದ್ಯ ಶಿವಾಜಿನಗರದ ಸಂಚಾರ ಠಾಣೆಯ ಕಟ್ಟಡದ ಮೊದಲನೇ ಮಹಡಿಯಲ್ಲಿ ಇದಕ್ಕೆ ಜಾಗ ನೀಡಲಾಗಿದೆ. 15 ದಿನಗಳ ಹಿಂದೆಯೇ ವಸ್ತುಗಳನ್ನು ನೂತನ ಠಾಣೆಗೆ ಸಾಗಣೆ ಮಾಡಲಾಗಿದ್ದು, ಸಿಬ್ಬಂದಿಯೂ ಹೊಸ ಠಾಣೆಯಲ್ಲಿ ಕೆಲಸ ಆರಂಭಿಸಿದ್ದಾರೆ.
‘ಹಲಸೂರು ಗೇಟ್ ಬಳಿ ಇದ್ದ ಮಹಿಳಾ ಠಾಣೆಯೂ, ಕೇಂದ್ರ ವಿಭಾಗದ ವ್ಯಾಪ್ತಿಯಲ್ಲಿರುವ ನಾಗರಿಕರಿಗೆ ಮಾತ್ರ ಹತ್ತಿರವಿತ್ತು. ಇತರೆ ವಿಭಾಗಗಳ ಜನರಿಗೆ ಠಾಣೆಗೆ ಬರುವುದು ಕಷ್ಟವಾಗುತ್ತಿತ್ತು. ಹೀಗಾಗಿ, ನಾಲ್ಕು ವಿಭಾಗಗಳಿಗೆ ಹತ್ತಿರವಾಗುವಂಥ ಹಾಗೂ ಶಿವಾಜಿನಗರ ಬಸ್ ನಿಲ್ದಾಣಕ್ಕೆ ಸಮೀಪವಿರುವಂಥ ಸ್ಥಳಕ್ಕೆ ಠಾಣೆಯನ್ನು ಸ್ಥಳಾಂತರಿಸಲಾಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಗೃಹ ಸಚಿವರ ಭೇಟಿ: ಹೊಸ ಠಾಣೆಗೆ ಶುಕ್ರವಾರ ಬೆಳಿಗ್ಗೆ ಭೇಟಿ ನೀಡಿದ ಗೃಹ ಸಚಿವ ಜಿ.ಪರಮೇಶ್ವರ್, ‘ಇಲ್ಲಿ ತಾತ್ಕಾಲಿಕ ಮಹಿಳಾ ಠಾಣೆಯನ್ನು ಆರಂಭಿಸಿದ್ದೇವೆ. ಮುಂದಿನ ದಿನಗಳಲ್ಲಿ ಠಾಣೆಗೆಂದೇ ಸ್ವಂತ ಕಟ್ಟಡ ನಿರ್ಮಿಸುತ್ತೇವೆ’ ಎಂದರು.
‘ನಗರದಲ್ಲಿ ಸದ್ಯದಲ್ಲೇ ಮಹಿಳಾ ಪೊಲೀಸರ ಗಸ್ತು ಆರಂಭವಾಗಲಿದೆ. ಇದು, ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಿಗೆ ತ್ವರಿತವಾಗಿ ಸ್ಪಂದಿಸಲು ಅನುಕೂಲವಾಗಲಿದೆ.’
‘ನಗರದ ಎರಡು ಮಹಿಳಾ ಪೊಲೀಸ್ ಠಾಣೆಗಳನ್ನು 4 ವಿಭಾಗಗಳಿಗೆ ಒಂದರಂತೆ ಪುನರ್ ವಿಂಗಡಣೆ ಮಾಡಲಾಗಿದೆ. ರಾಜ್ಯದಲ್ಲಿ 35 ಮಹಿಳಾ ಠಾಣೆಗಳಿದ್ದು, ಮಹಿಳಾ ಸಂಬಂಧಿ ಪ್ರಕರಣಗಳನ್ನು ಆಯಾ ಮಹಿಳಾ ಠಾಣೆಗಳಿಗೆ ವರ್ಗಾಯಿಸುತ್ತಿದ್ದೇವೆ’ ಎಂದು ಹೇಳಿದರು.
ನಗರ ಪೊಲೀಸ್ ಕಮಿಷನರ್ ಪ್ರವೀಣ್ ಸೂದ್, ಹೆಚ್ಚುವರಿ ಪೊಲೀಸ್ ಕಮಿಷನರ್ ಹೇಮಂತ್ ನಿಂಬಾಳ್ಕರ್, ಡಿಸಿಪಿ ಅಜಯ್ ಹಿಲೋರಿ ಇದ್ದರು.
* * *
ಉತ್ತರಪ್ರದೇಶದ ಮಾದರಿಯಲ್ಲಿ ‘ರೋಮಿಯೊ ನಿಗ್ರಹ ದಳ’ ಸ್ಥಾಪಿಸುವ ಅಗತ್ಯವಿಲ್ಲ. ರಾಜ್ಯದಲ್ಲಿ ರೋಮಿಯೊ ಕಾಟ ಹೆಚ್ಚಾದರೆ ಶಕ್ತಿಯುತ ದಳವನ್ನೇ ಸ್ಥಾಪಿಸುತ್ತೇವೆ
ಜಿ.ಪರಮೇಶ್ವರ್,
ಗೃಹಸಚಿವ