ಬೆಂಗಳೂರು: ನಗರದ ಸುಮ್ಮನಹಳ್ಳಿ ಜಂಕ್ಷನ್ ಬಳಿ ಸೋಮವಾರ ಸಂಜೆ ಸಂಭವಿಸಿದ ಸರಣಿ ಅಪಘಾತದಲ್ಲಿ 11 ವಾಹನಗಳಿಗೆ ಹಾನಿಯಾಗಿದ್ದು, ಎಂಟು ಮಂದಿ ಗಾಯಗೊಂಡಿದ್ದಾರೆ.
ಸಂಜೆ 4.35ರ ಸುಮಾರಿಗೆ ಸುಮ್ಮನಹಳ್ಳಿ ಜಂಕ್ಷನ್ನಲ್ಲಿ ಸಿಗ್ನಲ್ ಬಿದ್ದಿತ್ತು. ಈ ವೇಳೆ ಸುಂಕದಕಟ್ಟೆ ಕಡೆಗೆ ಹೊರಟಿದ್ದ ಟೆಂಪೊ (ಸಿಎಎಂ 2989), ಸಿಗ್ನಲ್ನಲ್ಲಿ ನಿಂತಿದ್ದ ಕಾರಿಗೆ ಹಿಂದಿನಿಂದ ಡಿಕ್ಕಿ ಹೊಡೆಯಿತು. ಬಳಿಕ ಕಾರು ಮುಂದೆ ಇದ್ದ ಮತ್ತೊಂದು ವಾಹನಕ್ಕೆ ಗುದ್ದಿತು. ಈ ರೀತಿ ಸಂಭವಿಸಿದ ಅಪಘಾತದಲ್ಲಿ ಮೂರು ಕಾರುಗಳು, ಎರಡು ಬೈಕ್ಗಳು, ಸರಕು ಸಾಗಾಣೆ ವಾಹನ, ಆಟೊಗಳು ಸೇರಿದಂತೆ ಒಟ್ಟು 11 ವಾಹನಗಳು ಜಖಂ ಆದವು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯಲ್ಲಿ ಟೆಂಪೊ ಚಾಲಕ ಚಿನ್ನಪ್ಪ, ದ್ವಿಚಕ್ರ ವಾಹನದಲ್ಲಿದ್ದ ಶಿಕ್ಷಕಿ ಪಂಕಜ (48), ಇತರೆ ವಾಹನಗಳಲ್ಲಿದ್ದ ಆರ್.ದೀಪು, ಪುಟ್ಟಲಿಂಗಪ್ಪ, ಚಂದ್ರು, ದೀಪು, ರಾಜು ಮತ್ತು ಸಂತೋಷ್ ಎಂಬುವರು ಗಾಯಗೊಂಡಿದ್ದಾರೆ. ಅವರನ್ನು ನಗರದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಚಿನ್ನಪ್ಪ ಮತ್ತು ಪುಟ್ಟಲಿಂಗಪ್ಪ ಅವರ ಕಾಲು ಮುರಿದಿದೆ. `ಬ್ರೇಕ್ ವೈಫಲ್ಯದಿಂದಾಗಿ ಈ ಅನಾಹುತ ಸಂಭವಿಸಿದೆ' ಎಂದು ಚಿನ್ನಪ್ಪ ವಿಚಾರಣೆ ವೇಳೆ ಹೇಳಿದ್ದಾನೆ. ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕಾಮಾಕ್ಷಿಪಾಳ್ಯ ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ.