ಬೆಂಗಳೂರು: `ರಾಜ್ಯದ ವಿವಿಧ ಕಡೆಗಳಲ್ಲಿ, ವಿಭಿನ್ನ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಗುರುತಿಸಿ ಅವರ ಕುರಿತು ಲೇಖಕರಿಂದ ಕೃತಿಗಳನ್ನು ರಚನೆ ಮಾಡಿಸಲಾಗುವುದು' ಎಂದು ಸುವರ್ಣ ಪುಸ್ತಕ ಮಾಲೆಯ ಪ್ರಧಾನ ಸಂಪಾದಕ ಪಿ.ವಿ.ನಾರಾಯಣ ಹೇಳಿದರು.
ಉದಯಭಾನು ಕಲಾಸಂಘವು ನಗರದಲ್ಲಿ ಈಚೆಗೆ ಆಯೋಜಿಸಿದ್ದ `ಉದಯಭಾನು ಸುವರ್ಣ ಪುಸ್ತಕಮಾಲೆ ಯೋಜನೆ ಉದ್ಘಾಟನೆ ಹಾಗೂ ಮೊದಲ ಕಂತಿನ ಐದು ವಿಭಿನ್ನ ಸಾಧಕರ ಕೃತಿಗಳ ಲೋಕಾರ್ಪಣೆ' ಕಾರ್ಯಕ್ರಮದಲ್ಲಿ ಮಾತನಾಡಿದರು.
`ಐವತ್ತು ಜನ ಸಾಧಕರ ಸಾಧನೆಯ ಕುರಿತು ಐವತ್ತು ಜನ ಲೇಖಕರಿಂದ ಕೃತಿಗಳನ್ನು ರಚಿಸುವ ಯೋಜನೆಯು ಉದಯಭಾನು ಕಲಾಸಂಘದ ಮುಂದಿದೆ. ಮೊದಲ ಹಂತದ ಐದು ಮಂದಿ ಸಾಧಕರ ಕೃತಿಗಳನ್ನು ರಚನೆ ಮಾಡಿಸಿ ಬಿಡುಗಡೆ ಮಾಡಲಾಗಿದೆ' ಎಂದರು.
`ಎಲೆ ಮರೆ ಕಾಯಿಯಂತಿರುವ ವಿಭಿನ್ನ ಸಾಧಕರನ್ನು ಗುರುತಿಸುವ ಪ್ರಯತ್ನ ಇದಾಗಿದೆ. ನಿಜವಾದ ಸಾಧಕರು ಹಿಂದೆ ಉಳಿದಿದ್ದಾರೆ. ಅವರು ಸಮಾಜಕ್ಕೆ ನೀಡಿರುವ ಕೊಡುಗೆಯನ್ನು ಪರಿಚಯಿಸುವ ಕಾರ್ಯವನ್ನು ಉದಯಭಾನು ಕಲಾಸಂಘವು ಮಾಡುತ್ತಿದೆ' ಎಂದರು.
ವಿಮರ್ಶಕ ಸಿ.ಎನ್.ರಾಮಚಂದ್ರನ್ ಮಾತನಾಡಿ, `ಸಮಾಜವನ್ನು ಕಟ್ಟಿ ಆರೋಗ್ಯಪೂರ್ಣವಾಗಿ ಮುನ್ನಡೆಸಲು ಕೇವಲ ಸಾಹಿತಿಗಳು ಮಾತ್ರವಲ್ಲ, ಬೇರೆ ಬೇರೆ ಕ್ಷೇತ್ರಗಳಲ್ಲಿ ಕೆಲಸ ನಿರ್ವಹಿಸುವವರು ಕೂಡ ಶ್ರಮಿಸುತ್ತಾರೆ. ಆದರೆ, ಅವರು ಸಮಾಜದಲ್ಲಿ ಎಲೆಮರೆ ಕಾಯಿಯಂತೆ ಇರುತ್ತಾರೆ' ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯುಕ್ತ ಕೆ.ಆರ್.ರಾಮಕೃಷ್ಣ, ಉದಯಭಾನು ಕಲಾಸಂಘದ ಅಧ್ಯಕ್ಷ ಬಿ.ಕೃಷ್ಣ, ಉದಯಭಾನು ಉನ್ನತ ಅಧ್ಯಯನ ಕೇಂದ್ರದ ಗೌರವ ನಿರ್ದೇಶಕ ಪ್ರೊ.ಎಚ್.ಆರ್.ರಾಮಕೃಷ್ಣರಾವ್ ಭಾಗವಹಿಸಿದ್ದರು.