ಬೆಂಗಳೂರು: ಸಾಲಗಾರರಿಂದ ಹೆಚ್ಚಿನ ಬಡ್ಡಿ ವಸೂಲಿ ಮಾಡುತ್ತಿದ್ದ ಆರೋಪದ ಮೇಲೆ ಚಲನಚಿತ್ರ ನಿರ್ಮಾಪಕ ಸ್ವಸ್ತಿಕ್ ಶಂಕರ್ ಅವರನ್ನು ಕೇಂದ್ರ ಅಪರಾಧ ವಿಭಾಗದ (ವಂಚನೆ ಮತ್ತು ದುರುಪಯೋಗ ದಳ) ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಶೇಷಾದ್ರಿಪುರದ ನಟರಾಜ ಚಿತ್ರಮಂದಿರದ ಬಳಿ ಇರುವ ಸ್ವಸ್ತಿಕ್ ಶಂಕರ್ ಅವರ ಮನೆ ಮೇಲೆ ಬೆಳಿಗ್ಗೆ ಪೊಲೀಸರು ದಾಳಿ ನಡೆಸಿದರು. ಪರವಾನಿಗೆ ಇಲ್ಲದ ಏಳು ಬಂದೂಕುಗಳು, ಜಮೀನಿನ ದಾಖಲೆ ಪತ್ರಗಳು, ಬ್ಯಾಂಕ್ ಚೆಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸಹ ನಿರ್ಮಾಪಕರಾಗಿದ್ದ ಅವರು ತುಂಟ, ರಕ್ಷಕ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ಚಲನಚಿತ್ರ ಕಲಾವಿದರಿಗೆ ಸಾಲ ನೀಡಿ, ಹೆಚ್ಚಿನ ಬಡ್ಡಿ ವಸೂಲಿ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.