ಬೆಂಗಳೂರು: ‘ಕೈಗಡಿಯಾರವನ್ನು ₹ 5 ಲಕ್ಷಕ್ಕೆ ಮಾರಾಟ ಮಾಡಲು ಸಿದ್ಧ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಕೈಗಡಿಯಾರ ಬಿಡಿ, ಅವರನ್ನೇ ಹರಾಜು ಹಾಕಿದರೂ ಅವರ ಕುಟುಂಬದ ಸದಸ್ಯರೂ ಖರೀದಿಗೆ ಮುಂದೆ ಬರುವುದಿಲ್ಲ’ ಎಂದು ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದ ಗೌಡ ಲೇವಡಿ ಮಾಡಿದರು.
ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿ ಪರ ಗುರುವಾರ ಪ್ರಚಾರ ನಡೆಸಿದ ಅವರು ಸುದ್ದಿಗಾರರ ಜತೆ ಮಾತನಾಡಿದರು.
‘ರಾಜ್ಯ ಕಂಡ ಅತ್ಯಂತ ಕೆಟ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ. ಅವರು ಬೆಂಗಳೂರಿನ ಹಾಗೂ ರಾಜ್ಯ ದ ಅಭಿವೃದ್ಧಿಯನ್ನು ಸಂಪೂರ್ಣ ಕಡೆಗಣಿಸಿದ್ದಾರೆ. ಸಮಾಜವಾದಿ ಎಂದು ಹೇಳಿಕೊಳ್ಳುವ ಅವರು, ₹ 70 ಲಕ್ಷ ಮೌಲ್ಯದ ಕೈಗಡಿಯಾರ ಧರಿಸುತ್ತಿದ್ದಾರೆ. ಇದು ಅವರು ಸರಳ ಜೀವನ ನಡೆಸುವ ಪರಿಯೇ’ ಎಂದು ಅವರು ಪ್ರಶ್ನಿಸಿದರು.
‘ಕೈಗಡಿಯಾರವನ್ನು ಗೆಳೆಯರೊಬ್ಬರು ಉಡುಗೊರೆ ಕೊಟ್ಟಿದ್ದು’ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಇಂತಹ ದುಬಾರಿ ಉಡುಗೊರೆ ನೀಡಬೇಕಾದರೆ, ಅವರ ಗೆಳೆಯ ಅದೆಷ್ಟು ಪ್ರಯೋಜನ ಪಡೆದುಕೊಂಡಿರಬಹುದು’ ಎಂದರು.
ಹೆಬ್ಬಾಳಕ್ಕೆ ನೆರವು: ‘ಬೆಂಗಳೂರಿನಲ್ಲಿ ಫೆರಿಫೆರಲ್ ವರ್ತುಲ ರಸ್ತೆ ಹಾಗೂ ಉಪನಗರ ರೈಲು ಯೋಜನೆಗೆ ಕೇಂದ್ರ ನೆರವು ಒದಗಿಸಲಿದೆ. ಹೆಬ್ಬಾಳ ಅಭಿವೃದ್ಧಿಗೂ ಅಗತ್ಯ ನೆರವು ಒದಗಿಸಲಾಗುವುದು’ ಎಂದು ಸದಾನಂದ ಗೌಡ ತಿಳಿಸಿದರು.
‘ಎಸ್.ಎಂ.ಕೃಷ್ಣ, ಜನಾರ್ದನ ಪೂಜಾರಿ ಅವರಂತಹ ಕಾಂಗ್ರೆಸ್ನ ಹಿರಿಯ ನಾಯಕರೂ ಆಡಳಿತ ವೈಫಲ್ಯದ ಕುರಿತು ಬಹಿರಂಗವಾಗಿ ಮಾತನಾಡಿದ್ದಾರೆ ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಚ್, ಉಂಗುರ ಎಂದು ಕಾಲ ಹರಣ ಮಾಡುತ್ತಿದ್ದಾರೆ’ ಎಂದು ಕೇಂದ್ರ ಕಾನೂನು ಸಚಿವರು ಟೀಕಿಸಿದರು.