ಔರಾದ್: ತಾಲ್ಲೂಕಿನ ಬಾಚೆಪಳ್ಳಿ ಗ್ರಾಮದಲ್ಲಿ ಬ್ಯಾನರ್ ಕಟ್ಟುವ ವಿಚಾರಕ್ಕೆ ಪರಿಶಿಷ್ಟ ಜಾತಿ ಹಾಗೂ ಮರಾಠಾ ಯುವಕರ ನಡುವೆ ಮಾರಾಮಾರಿ ನಡೆದಿದೆ.
ಕಳೆದ ಶನಿವಾರ ನಡೆದ ಈ ಘಟನೆಯಿಂದ ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ, ಸಿಪಿಐ ರಘುವೀರಸಿಂಗ್ ಠಾಕೂರ್ ಗ್ರಾಮಕ್ಕೆ ಭೇಟಿ ನೀಡಿ ಶಾಂತಿ ಕಾಪಾಡುವಂತೆ ಉಭಯ ಸಮುದಾಯದವರಲ್ಲಿ ಮನವಿ ಮಾಡಿದ್ದಾರೆ.
ಅಂಬೇಡ್ಕರ್ ಜಯಂತಿ ಆಚರಣೆ ಸಂಬಂಧ ಪರಿಶಿಷ್ಟ ಜಾತಿ ಯುವಕರು ಬಸ್ ನಿಲ್ದಾಣದ ಬಳಿ ಬ್ಯಾನರ್ ಕಟ್ಟುತ್ತಿದ್ದರು. ಈಗಾಗಲೇ ನಾವು ಲಕ್ಷ್ಮಿ ಹಬ್ಬದ ಬ್ಯಾನರ್ ಕಟ್ಟಿದ್ದೇವೆ. ಬೇರೆ ಕಡೆ ಕಟ್ಟಿ ಎಂಬ ವಿಷಯದ ಕುರಿತು ಮಾತಿಗೆ ಮಾತು ಬೆಳೆದು ಮಾರಾಮಾರಿ ಹಂತಕ್ಕೆ ತಲುಪಿದೆ. ಮುಂಜಾಗ್ರತ ಕ್ರಮವಾಗಿ ಎರಡೂ ಕಡೆಯ ಯುವಕರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಸಂತಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.