ಹುಮನಾಬಾದ್: ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಚೆಕ್ಪೋಸ್ಟ್ ಬಳಿ ಮಂಗಳವಾರ ಮಹಿಂದ್ರಾ ಟಿಯುವಿ ಮತ್ತು ಓಮಿನಿ ನಡುವೆ ಅಪಘಾತ ಸಂಭವಿಸಿ ಮೂವರು ಯಾತ್ರಾರ್ಥಿಗಳು ಸಾವನ್ನಪ್ಪಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ.
ಬೀದರ್ ತಾಲ್ಲೂಕಿನ ಚಿಲರ್ಗಿ ಗ್ರಾಮದ ಶಿವರಾಜ ಪುಂಡಲೀಕ ಭುತಪೋಲೆ(40) ಸ್ಥಳದಲ್ಲೇ ಮೃತಪಟ್ಟರೆ, ಬೀದರ್ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ರಾಯಪ್ಪ ಘಾಳೆಪ್ಪ ಭುತಪೋಲೆ (40), ತುಕಾರಾಂ ಮಾರುತಿ ಬೋರಾಳೆ (50) ಮೃತಪಟ್ಟಿದ್ದಾರೆ.
ಅದೇ ಗ್ರಾಮದ ಓಮಿನಿ ವಾಹನ ಚಾಲಕ ಖಾಸೀಂ, ಪಾರಮ್ಮ, ನಾಗಮ್ಮ, ಸವಿತಾ, ನರಸಿಂಗ್, ಅಶೋಕ ಎಂಬವರಿಗೆ ಸಣ್ಣಪುಟ್ಟ ಗಾಯಗಳಾವೆ. ಗಾಯಳುಗಳು ತುಳಜಾಪುರ ಅಂಬಾಭವಾನಿ ದರ್ಶನ ಮುಗಿಸಿ ವಾಪಸ್ ಆಗುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ ಎಂದು ಹುಮನಾಬಾದ್ ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ.
ಅಪಘಾತದ ನಂತರ ಮಹೇಂದ್ರ ವಾಹನದ ಚಾಲಕ ಪರಾರಿಯಾಗಿದ್ದು, ವಾಹನವು ಮಹಾರಾಷ್ಟ್ರದ ಉಸ್ಮಾನಬಾದ್ ಮೂಲದ ವ್ಯಕ್ತಿಯೊಬ್ಬರಿಗೆ ಸೇರಿದ್ದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.