ಬಸವಕಲ್ಯಾಣದ ವಿಶ್ವ ಬಸವ ಧರ್ಮ ಟ್ರಸ್ಟ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮತ್ತು ಲಿಂಗಾಯತ ಮಠಾಧೀಶರ ಒಕ್ಕೂಟದಿಂದ ಈ ಸಮಾರಂಭ ಏರ್ಪಡಿಸಲಾಗಿದೆ. ಕಾರ್ಯಕ್ರಮ ಫೆಬ್ರುವರಿ 26ಕ್ಕೆ ನಿಗದಿಯಾಗಿತ್ತು. ಮಂಟಪ ಮತ್ತು ವೇದಿಕೆ ಸಿದ್ಧಪಡಿಸುವ ಕೆಲಸ ಎರಡು ವಾರಗಳ ಹಿಂದೆಯೇ ಆರಂಭ ಆಗಿತ್ತು. ಅನಿವಾರ್ಯ ಕಾರಣಕ್ಕೆ ಸಮಾರಂಭ ಮುಂದೂಡಿದ್ದರಿಂದ ಕೆಲಸ ಸ್ಥಗಿತಗೊಂಡಿತ್ತು. ದಿಢೀರನೆ ಮತ್ತೆ ಸಮಾರಂಭ ಹಮ್ಮಿಕೊಳ್ಳುವುದಕ್ಕೆ ನಿರ್ಧರಿಸಿದ್ದರಿಂದ ಎಲ್ಲವೂ ತರಾತುರಿಯಲ್ಲಿ ನಡೆದಿದೆ. ಮೈದಾನದ ಪ್ರವೇಶ ದ್ವಾರದ ಪಕ್ಕದಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ. ತೇರಿನ ಕಟ್ಟೆಯ ಹತ್ತಿರ ಬೃಹತ್ ಮಂಟಪ ನಿರ್ಮಿಸಲಾಗಿದೆ. ಈಗಾಗಲೇ ವಿವಿಧೆಡೆಯಿಂದ ಪೊಲೀಸರು ಬಂದಿದ್ದು, ಎಲ್ಲೆಡೆ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.