ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆರತಿ ಶಿಕ್ಷಣಕ್ಕೆ ಬಡತನ ಅಡ್ಡಿ: ಸೌಲಭ್ಯದ ಭರವಸೆ

Published 14 ಮೇ 2024, 16:11 IST
Last Updated 14 ಮೇ 2024, 16:11 IST
ಅಕ್ಷರ ಗಾತ್ರ

ಬಸವಕಲ್ಯಾಣ: ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ 6ನೇ, ಜಿಲ್ಲಾ ಮಟ್ಟದಲ್ಲಿ 2 ನೇ ಸ್ಥಾನ ಪಡೆದ ತಾಲ್ಲೂಕಿನ ಖಾನಾಪುರ (ಕೆ)ವಾಡಿಯ ಆರತಿ ಗಣಪತಿ ಅವರ ಮನೆಗೆ ಸೋಮವಾರ ತಾಲ್ಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ಭೇಟಿ ನೀಡಿ ವಿದ್ಯಾರ್ಥಿನಿಯನ್ನು ಸನ್ಮಾನಿಸಿ ಸರ್ಕಾರದ ಸೌಲಭ್ಯ ಒದಗಿಸುವ ಭರವಸೆ ನೀಡಿದ್ದಾರೆ.

ಈ ಸಂಬಂಧ ಪ್ರಜಾವಾಣಿಯಲ್ಲಿ ಮೇ 12ರಂದು ‘ಆರತಿ ಕಾಲೇಜು ಶಿಕ್ಷಣಕ್ಕೆ ಬಡತನ ಅಡ್ಡಿ’ ಎಂಬ ಶೀರ್ಷಿಕೆಯಡಿ ವರದಿ ಪ್ರಕಟವಾಗಿತ್ತು. ಇದನ್ನು ಗಮನಿಸಿ ವಿದ್ಯಾರ್ಥಿನಿಯ ಮನೆಗೆ ತೆರಳಿದ ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಶ್ರೀಶೈಲ್ ಕಾಚಾಪುರ ಮಾತನಾಡಿ, ‘ಇಲಾಖೆಯಿಂದ ವಿವಿಧ ಸೌಲಭ್ಯ ಒದಗಿಸಿ ಕೊಡುತ್ತೇನೆ’ ಎಂದರು.

ಪಶು ವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕ ಡಾ.ರವೀಂದ್ರ ನಾರಾಯಣಪುರ ಮಾತನಾಡಿ, ‘ಬಡತನದಲ್ಲೂ ಹಿರಿಯ ಮಗನಿಗೆ ಐಐಟಿ ಶಿಕ್ಷಣ ನೀಡಿ ಯುಪಿಎಸ್ಸಿ ಪರೀಕ್ಷೆಯ ಕೋಚಿಂಗ್‌ಗೆ ದೆಹಲಿಗೆ ಕಳಿಸಿರುವುದು ಹಾಗೂ ಐವರು ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುತ್ತಿರುವ ತಂದೆ ತಾಯಿಯ ಪರಿಶ್ರಮ ಹೇಳತೀರದು. ಇವರಿಗೆ ವಿವಿಧ ಸಂಘ ಸಂಸ್ಥೆಗಳಿಂದ ಆರ್ಥಿಕ ಸಹಾಯ ದೊರಕಿಸಿ ಕೊಡಲು ಪ್ರಯತ್ನಿಸಲಾಗುವುದು’ ಎಂದರು.

ಕರ್ನಾಟಕ ವಸತಿ ಶಾಲಾ ಶಿಕ್ಷಣ ಸಂಸ್ಥೆಗಳ ಸಂಘದ ಪರವಾಗಿ ಬೀದರ್ ಜಿಲ್ಲಾ ಸಮನ್ವಯಾಧಿಕಾರಿ ಭೀಮರೆಡ್ಡಿ ರಾಸನೆ, ಸಹಾಯಕ ಕೃಷಿ ನಿರ್ದೇಶಕ ಮಾರ್ತಂಡ ಮಚಕೂರಿ, ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಾಚಾರ್ಯ ಶರಣಬಸಪ್ಪ ದಂಡೆ, ಗ್ರಾಮ ಪಂಚಾಯಿತಿ ಸದಸ್ಯ ವೆಂಕಟ, ವಿದ್ಯಾರ್ಥಿನಿ ತಾಯಿ ಅನಸೂಯಾ ಉಪಸ್ಥಿತರಿದ್ದರು.

ಮನವಿ: ಆರತಿ ಕಿತ್ತೂರರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಓದಿದ್ದು ಕಾಲೇಜು ಶಿಕ್ಷಣಕ್ಕಾಗಿ ಆರ್ಥಿಕ ಸಹಾಯ ಪಡೆಯಲಾಗುತ್ತಿದೆ. ಪ್ರಜಾವಾಣಿಯಲ್ಲಿನ ವರದಿ ಗಮನಿಸಿ ಸಂಘ ಸಂಸ್ಥೆಯವರು ಸಂಪರ್ಕಿಸಿ ಧನಸಹಾಯ ನೀಡುವುದಾಗಿ ಹೇಳಿದ್ದಾರೆ. ಆಸಕ್ತರು, ಫೋನ್ ಪೇ ಸಂಖ್ಯೆ-9880286205 (ಆರತಿ ಗಣಪತಿ) ಈ ಸಂಖ್ಯೆಗೆ ಹಣ ಕಳಿಸಬಹುದು. ಹೆಚ್ಚಿನ ಮಾಹಿತಿಗೆ 9110298873, 9449028679 ಈ ಸಂಖ್ಯೆಗಳಿಗೆ ಸಂಪರ್ಕಿಸಬೇಕು ಎಂದು ಶಾಲೆಯ ಪ್ರಾಚಾರ್ಯ ಶರಣಬಸಪ್ಪ ದಂಡೆ ಕೇಳಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT