ಬೀದರ್: ಅಯೋಧ್ಯೆಯಲ್ಲಿ ಸೋಮವಾರ ನಡೆದ ರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವು ಜಿಲ್ಲೆಯ ರಾಮಭಕ್ತರಲ್ಲಿ ಭಕ್ತಿಯ ಅಲೆ, ಅಭಿಮಾನ ಉಕ್ಕೇರುವಂತೆ ಮಾಡಿತು.
ಅದಕ್ಕೆ ಸಾಕ್ಷಿಯೆಂಬಂತೆ ಎಲ್ಲೆಡೆ ಭಕ್ತಿಭಾವದಿಂದ ರಾಮನಿಗೆ ವಿಶೇಷ ಪೂಜೆ, ರಾಮನ ಜಪ, ಹನುಮಾನ್ ಚಾಲೀಸಾ ಪಠಣ ಕಾರ್ಯಕ್ರಮಗಳು ನಡೆದವು.
ನಗರದ ಗುಂಪಾ, ಕಿತ್ತೂರ ರಾಣಿ ಚನ್ನಮ್ಮ ವೃತ್ತ, ರಾಮ ಚೌಕ, ಫತ್ತೇ ದರವಾಜ್ ಸಂತೋಷಿ ಮಾತಾ ದೇವಸ್ಥಾನ, ಶಹಾಗಂಜ್ ಭವಾನಿ ಮಾತಾ ದೇವಸ್ಥಾನ, ರಾಮ ಮಂದಿರ, ಮಂಗಲ್ಪೇಟ್, ಕುಂಬಾರವಾಡ, ಶಿವನಗರ, ನೌಬಾದ್ ಸೇರಿದಂತೆ ಜಿಲ್ಲೆಯ ಹಲವೆಡೆ ಕಾರ್ಯಕ್ರಮಗಳು ಜರುಗಿದವು.
ವೃತ್ತಗಳಲ್ಲಿ ಕೇಸರಿ ವರ್ಣದ ಧ್ವಜ, ತಳಿರು ತೋರಣಗಳನ್ನು ಕಟ್ಟಲಾಗಿತ್ತು. ರಾಮ ನಿಂತ ಭಂಗಿಯ ಎತ್ತರದ ಫ್ಲೆಕ್ಸ್ಗಳನ್ನು ಅಳವಡಿಸಿ ವಿಶೇಷ ಪೂಜೆ ನೆರವೇರಿಸಲಾಯಿತು. ಪಟಾಕಿ ಸಿಡಿಸಿ ಸಂಭ್ರಮಿಸಿದರು. ‘ಜೈ ಶ್ರೀರಾಮ’ ಎಂದು ಘೋಷಣೆಗಳನ್ನು ಹಾಕಿದರು. ಯುವಕರು ಬೈಕ್ಗಳಿಗೆ ಭಗವಾ ಧ್ವಜ ಕಟ್ಟಿಕೊಂಡು ಪ್ರಮುಖ ರಸ್ತೆಗಳಲ್ಲಿ ರ್ಯಾಲಿ ನಡೆಸಿದರು.
ನಗರದ ಪ್ರಮುಖ ರಸ್ತೆಗಳಲ್ಲಿ ಕೆಲ ವಾಣಿಜ್ಯ ಮಳಿಗೆಯವರು ಕೂಡಿಕೊಂಡು ರಾಮನ ಭಾವಚಿತ್ರ ಇರಿಸಿ, ಪೂಜೆ ಸಲ್ಲಿಸಿದರು. ಜನರಿಗೆ ಲಾಡು, ಸಿಹಿ ವಿತರಿಸಿದರು. ಮತ್ತೆ ಕೆಲವೆಡೆ ಅನ್ನದಾಸೋಹಕ್ಕೂ ವ್ಯವಸ್ಥೆ ಮಾಡಲಾಗಿತ್ತು.
ನಗರದ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ವೇದಿಕೆ ನಿರ್ಮಿಸಿ ರಾಮನಿಗೆ ಪೂಜೆ ಸಲ್ಲಿಸಿದರು. ನಂತರ ಸಾರ್ವಜನಿಕರಿಗೆ 5 ಸಾವಿರ ಲಾಡುಗಳನ್ನು ವಿತರಿಸಿದರು. ನಗರದ ಗುಂಪಾ ಬಳಿ ಯುವಕರು ಸಿಹಿ ವಿತರಿಸಿದರು. ದೀಪಕ್ ಸಿನಿಮಾ ಮಂದಿರದ ಬಳಿ ವಾಣಿಜ್ಯ ಮಳಿಗೆಯವರು ಅನ್ನದಾಸೋಹದ ವ್ಯವಸ್ಥೆ ಮಾಡಿದ್ದರು. ಜತೆಗೆ ರಾಮಚಂದ್ರನ ಗುಣಗಾನ ಮಾಡುವ ಸಂಗೀತವೂ ಹಾಕಿದ್ದರು.
ಬಿಜೆಪಿ ಕಚೇರಿಯಲ್ಲೂ ಕಾರ್ಯಕ್ರಮ ಆಚರಿಸಲಾಯಿತು. ಕಚೇರಿ ಪ್ರಭಾರಿ ರಾಜಶೇಖರ ನಾಗಮೂರ್ತಿ ಮಾತನಾಡಿ, ಅಯೋಧ್ಯೆಯಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀರಾಮ ಲಲ್ಲಾ ಮಂದಿರ ಸ್ಥಾಪನೆ ಒಂದು ಐತಿಹಾಸಿಕ ಘಟನೆಯಾಗಿದೆ. 500 ವರ್ಷಗಳ ಸುದೀರ್ಘ ಸಂಘರ್ಷದ ಫಲ ಇಂದು ಸಿಕ್ಕಿದೆ ಎಂದರು.
ಪ್ರಮುಖರಾದ ರಾಜಕುಮಾರ ಪಾಟೀಲ ನೇಮತಾಬಾದ, ಶ್ರೀನಿವಾಸ ಚೌಧರಿ, ಕಪಿಲ ಪಾಟೀಲ, ಸೂರ್ಯಕಾಂತ ರಾಮಶೆಟ್ಟಿ, ಸಂಜುಕುಮಾರ ಸಜ್ಜನ, ಗೋಪಾಲಕೃಷ್ಣ ಕುಕಡಾಲ, ಯೋಗೇಶ್ವರಿ, ಸೋನಕಾಂಬಳೆ, ಸಂಗೀತಾ ಅಡಕಾಯಿ, ನಿತಿನ್ ಕರ್ಪೂರ, ರವೀಂದ್ರ ವಟ್ಟಗೆ, ವೀರನಾಥ ತೋಗಲೂರ್, ಕಾಶಿನಾಥ ಪಾಟೀಲ ಇತರರಿದ್ದರು.
ರಾಮ ಮಂದಿರದಲ್ಲಿ ಆಯೋಜಿಸಿದ ರಾಮೋತ್ಸವದಲ್ಲಿ ಪ್ರಮುಖರಾದ ಸುನೀಲ ಮಹಾರಾಜ, ಮನೋಹರ ದಂಡೆ, ಸತೀಶ ಮೊಟ್ಟೆ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
ಕುಣಿದು ಕುಪ್ಪಳಿಸಿದ ಕೇಂದ್ರ ಸಚಿವ
ಬೀದರ್ನ ರಾಮ ಚೌಕದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ ಅವರು ಕುಣಿದು ಕುಪ್ಪಳಿಸಿದರು. ಸಚಿವರು ಪಂಚೆ ಕೇಸರಿ ಶಲ್ಯ ಧರಿಸಿಕೊಂಡು ರಾಮನಿಗೆ ಜಯವಾಗಲಿ ಎಂದು ಘೋಷಣೆ ಕೂಡ ಹಾಕಿದರು. ವಿಧಾನ ಪರಿಷತ್ ಸದಸ್ಯ ರಘುನಾಥರಾವ್ ಮಲ್ಕಾಪುರೆ ಬಿಜೆಪಿ ಮುಖಂಡರಾದ ರೇವಣಸಿದ್ದಪ್ಪ ಜಲಾದೆ ಬಾಬುವಾಲಿ ಗುರುನಾಥ ಕೊಳ್ಳೂರ ಸೇರಿ ಇತರರು ಪಾಲ್ಗೊಂಡಿದ್ದರು. ಬಳಿಕ ಬ್ರಹ್ಮಪುರ ಕಾಲೊನಿ ಪ್ರತಾಪನಗರ ವಿದ್ಯಾನಗರ ಸೇರಿದಂತೆ ಹಲವೆಡೆ ಏರ್ಪಡಿಸಿದ್ದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ಭಕ್ತರಿಗೆ ಪ್ರಸಾದ ವಿತರಿಸಿದರು. ‘ಐತಿಹಾಸಿಕ ದಿನಕ್ಕೆ ನಾವೆಲ್ಲರೂ ಸಾಕ್ಷಿಯಾಗಿದ್ದೇವೆ. ನಾವೆಲ್ಲರೂ ಪುಣ್ಯವಂತರಾಗಿದ್ದೇವೆ. ಇದಕ್ಕೆ ಶ್ರಮಿಸಿದ ಎಲ್ಲರೂ ಅಭಿನಂದನಾರ್ಹರು’ ಎಂದು ಸಚಿವರು ಹೇಳಿದರು.
ರಾಮನ ವೇಷಧಾರಿಗಳ ಮೆರವಣಿಗೆ
ಬೀದರ್ನಲ್ಲಿ ಸೋಮವಾರ ಜನಸೇವಾ ಶಿಶು ಮಂದಿರ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಮಕ್ಕಳು ರಾಮ ಲಕ್ಷ್ಮಣ ಸೀತೆ ಹಾಗೂ ಆಂಜನೇಯನ ವೇಷ ಧರಿಸಿ ಗಮನ ಸೆಳೆದರು. ಬಳಿಕ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ತಲೆ ಮೇಲೆ ಕಿರೀಟ ಭುಜಕ್ಕೆ ಬಾಣ ಹಾಕಿಕೊಂಡು ಕೈಯಲ್ಲಿ ಬಿಲ್ಲು ಹಿಡಿದಿದ್ದ ರಾಮ- ಲಕ್ಷಣ ಗದೆ ಹಿಡಿದುಕೊಂಡಿದ್ದ ಹನುಮಂತ ಹಾಗೂ ಸೀತೆ ಪಾತ್ರಧಾರಿಗಳು ಸಾರ್ವಜನಿಕರ ಗಮನ ಸೆಳೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.