ಬೀದರ್: ಪಿಂಚಣಿ ಹಾಗೂ ಇತರ ಸೌಲಭ್ಯದ ಕಡತಕ್ಕೆ ನಿವೃತ್ತ ಶಿಕ್ಷಕಿಯಿಂದ ಲಂಚ ಸ್ವೀಕರಿಸುತ್ತಿದ್ದ ಇಲ್ಲಿಯ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯ ಮುಖ್ಯಶಿಕ್ಷಕ ತುಕಾರಾಮ ಕಾಂಬಳೆ ಗುರುವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ನಗರದಲ್ಲಿ ₹50 ಸಾವಿರ ನಗದು ಹಾಗೂ ₹1 ಲಕ್ಷದ ಚೆಕ್ ಪಡೆಯುವಾಗ ಬೀದರ್ ಲೋಕಾಯುಕ್ತ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿ ಮುಖ್ಯಶಿಕ್ಷಕರನ್ನು ವಶಕ್ಕೆ ಪಡೆದರು.
2020 ರಲ್ಲಿ ನಿವೃತ್ತಿ ಹೊಂದಿದ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕಿ ಶಶಿಕಲಾ ಮನೋಹರ ಧನ್ನೂರಕರ್ ಸರ್ಕಾರದಿಂದ ಸಿಗಬೇಕಿದ್ದ ಪಿಂಚಣಿ ಹಾಗೂ ಇತರ ಸೌಲಭ್ಯದ ಕಡತ ತಯಾರಿಸಿ ಸಲ್ಲಿಸಲು ಮುಖ್ಯಶಿಕ್ಷಕರನ್ನು ಕೋರಿದ್ದರು. ಆದರೆ, ಅವರು ₹3 ಲಕ್ಷಕ್ಕೆ ಬೇಡಿಕೆ ಇಟ್ಟು, ನಂತರ ಶಿಕ್ಷಕಿ ಮನವಿ ಮೇರೆಗೆ ₹1.50 ಲಕ್ಷಕ್ಕೆ ಒಪ್ಪಿದ್ದರು ಎಂದು ಕಲಬುರ್ಗಿಯ ಲೋಕಾಯುಕ್ತ ಎಸ್.ಪಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಲಂಚ ಸ್ವೀಕರಿಸುವಾಗ ಮುಖ್ಯಶಿಕ್ಷಕರನ್ನು ವಶಕ್ಕೆ ಪಡೆದಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಹೇಳಿದ್ದಾರೆ.