ಬೀದರ್: ನಗರದ ಬಹಮನಿ ಕೋಟೆಯಲ್ಲಿ ಬೊಮ್ಮಗೊಂಡೇಶ್ವರ ಉತ್ಸವ ಆಯೋಜಿಸಲು ಜಿಲ್ಲಾಡಳಿತ ಅನುಮತಿ ನೀಡಬೇಕೆಂದು ಜಿಲ್ಲಾ ಗೊಂಡ ವಿದ್ಯಾರ್ಥಿ ಸಂಘ ಒತ್ತಾಯಿಸಿದೆ.
ಸಂಘದ ಪದಾಧಿಕಾರಿಗಳು ನಗರದಲ್ಲಿ ಶನಿವಾರ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರಿಗೆ ಮನವಿ ಪತ್ರ ಸಲ್ಲಿಸಿ ಆಗ್ರಹಿಸಿದರು.
ಬೊಮ್ಮಗೊಂಡೇಶ್ವರರು ನೀಡಿರುವ ಕೊಡುಗೆ ಅಪಾರ. ಅವರ ಸ್ಮರಣೆ, ಆದರ್ಶಗಳ ಪ್ರಚಾರ ಅಗತ್ಯ. ಬೊಮ್ಮಗೊಂಡೇಶ್ವರರು 14ನೇ ಶತಮಾನದಲ್ಲಿ ಜಿಲ್ಲೆಯಲ್ಲಿ ಆಗಿ ಹೋದ ಪವಾಡ ಪುರುಷರು. ಬೀದರ್ ಕೋಟೆ ನಿರ್ಮಾಣಕ್ಕೆ ಕಾರಣರಾದವರಲ್ಲಿ ಒಬ್ಬರು. ದುಷ್ಟ ಗೋಸಾಯಿಯನ್ನು ಸಂಹರಿಸಿದ್ದರು. ಬರಗಾಲದಲ್ಲಿ ಬಹಮನಿ ಅರಸ ಹಾಗೂ ಆತನ ಸೈನಿಕರ ಬಾಯಾರಿಕೆ ನೀಗಿಸಿದ್ದರು. ಕೋಟೆ ಕಟ್ಟಲು ಕಾಣಿಕೆ ಕೊಟ್ಟಿದ್ದರು ಎಂದು ಸಂಘದ ಜಿಲ್ಲಾ ಅಧ್ಯಕ್ಷ ಸಂತೋಷಕುಮಾರ ಜೋಳದಾಪಕೆ ತಿಳಿಸಿದರು.
ಕೋಟೆಯಲ್ಲಿ ಬೊಮ್ಮಗೊಂಡೇಶ್ವರ ಸಮಾಧಿ ಇದೆ. ಬೊಮ್ಮಗೊಂಡೇಶ್ವರ ಕೆರೆ ಹಾಗೂ ನಾವದಗೇರಿ ಬಳಿಯ ಬೊಮ್ಮಗೊಂಡ ಗುಡ್ಡ ಅವರ ಇತಿಹಾಸಕ್ಕೆ ಸಾಕ್ಷಿಯಾಗಿವೆ ಎಂದರು.