ಬೀದರ್: ‘ದೇಶದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿ ಫುಲೆಯವರ ಜನ್ಮದಿನಕ್ಕೆ ರಾಷ್ಟ್ರೀಯ ರಜೆ ಘೋಷಿಸಬೇಕು’ ಎಂದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ ವಾದ) ರಾಜ್ಯ ಸಂಘಟನಾ ಸಂಚಾಲಕ ರಮೇಶ ಡಾಕುಳಗಿ ಆಗ್ರಹಿಸಿದರು.
ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಬುಧವಾರ ಸಾವಿತ್ರಿಬಾಯಿ ಫುಲೆ ಜನ್ಮದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಶಾಲೆ ಆರಂಭಿಸಿ, ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿದವರು ಸಾವಿತ್ರಿಬಾಯಿ. ಹಾಗಾಗಿ ಅವರ ಜನ್ಮದಿನಕ್ಕೆ ರಾಷ್ಟ್ರೀಯ ರಜೆ ಘೋಷಿಸಬೇಕು. ಬೌದ್ಧ ಪೂರ್ಣಮೆ ದಿನವೂ ರಾಷ್ಟ್ರೀಯ ರಜೆಯನ್ನಾಗಿ ಘೋಷಿಸಬೇಕು’ ಎಂದು ಒತ್ತಾಯಿಸಿದರು.
ವಿಜಯಪುರ ಮಹಿಳಾ ವಿಶ್ವವಿದ್ಯಾಲಯಕ್ಕೆ ಮಾತೆ ಸಾವಿತ್ರಿಬಾಯಿ ಫುಲೆಯವರ ಹೆಸರಿಡಬೇಕು. ರಾಜ್ಯ ಮತ್ತು ರಾಷ್ಟ್ರದ ವಸತಿ ಶಾಲೆಗಳಿಗೆ ಸಾವಿತ್ರಿಬಾಯಿ ಫುಲೆಯವರ ಹೆಸರು ನಾಮಕರಣ ಮಾಡಬೇಕು ಎಂದು ಆಗ್ರಹಿಸಿದರು.
ಸಮಿತಿಯ ಪ್ರಮುಖರಾದ ರಾಜಕುಮಾರ ಬನ್ನೇರ್, ಬಸವರಾಜ ಸಾಗರ, ರಮೇಶ ಮಂದಕನಳ್ಳಿ, ಬಸವರಾಜ ಕಾಂಬಳೆ, ಬಕ್ಕಪ್ಪಾ ದಂಡಿನ್, ರಂಜಿತಾ ಜೈನೂರ್, ಅಹಮ್ಮದ್ ಅಲಿಯಾಬಾದ, ಝರೆಪ್ಪಾ ರಾಂಪೂರೆ, ಸುಧಾಕರ ಮಾಳಗೆ, ವಿದ್ಯಾಸಾಗರ ಬೆಲ್ದಾರ್, ಸಂಜುಕುಮಾರ ಬ್ಯಾಗಿ, ಲಕ್ಷ್ಮಣ ಹೊನ್ನಡ್ಡಿ, ರಾಜಕುಮಾರ ಕಾಳೆಕರ್, ಮಾರುತಿ ಜಗದಾಳೆ, ಘಾಳೆಪ್ಪಾ ಮಳಚಾಪೂರ, ಸೂರ್ಯಕಾಂತ ಸಾದುರೆ, ಗೋಪಾಲ ಸಾಗರ, ನಿತಿನ ಹೊಸಮನಿ, ಶಾಹುರಾಜ ಡಾಕುಳಗಿ, ವಿಠಲ ಲಾಡ್ಕರ್, ತುಕಾರಾಮ ಲಾಡ್ಕರ್, ಚಂದ್ರಕಾಂತ ನಿರಾಟೆ, ಸಾಗರ ಮರಕಲಕರ್ ಹಾಜರಿದ್ದರು.
ಬಸವೇಶ್ವರ ಬಿಇಡಿ ಕಾಲೇಜಿನಲ್ಲಿ ಸಾವಿತ್ರಿಬಾಯಿ ಜನ್ಮದಿನ: ನಗರದ ಕಾಲೇಜಿನಲ್ಲಿ ಬುಧವಾರ ಏರ್ಪಡಿಸಿದ್ದ ಸಾವಿತ್ರಿಬಾಯಿ ಫುಲೆ ಜಯಂತಿಯಲ್ಲಿ ಭಾಗವಯಹಿಸಿ ಮಾತನಾಡಿದ ಕಲಾವಿದ ಶಂಭುಲಿಂಗ ವಾಲ್ದೊಡ್ಡಿ, ಮನುಷ್ಯರನ್ನು ಮನುಷ್ಯರಂತೆ ಕಾಣುವುದೇ ನಿಜವಾದ ಸಮಾನತೆ. ಜಾತಿವ್ಯವಸ್ಥೆ, ಶೋಷಣೆ, ದಬ್ಬಾಳಿಕೆ, ತಾರತಮ್ಯ ತೊಲಗಬೇಕು. ಸ್ತ್ರೀ ಶಿಕ್ಷಣದ ಮಹತ್ವ ಅರಿತು ಅದನ್ನು ಸಿಗುವಂತೆ ಮಾಡಿದವರು ಸಾವಿತ್ರಿಬಾಯಿ ಫುಲೆ ಎಂದರು.
ಮಲ್ಲಿಕಾರ್ಜುನ ಚ. ಕನಕಟ್ಟೆ ಮಾತನಾಡಿ, ಸಾವಿತ್ರಿಬಾಯಿ ಫುಲೆಯವರು ಒಬ್ಬ ಛಲಗಾರ್ತಿಯಾಗಿ, ಹೋರಾಟಗಾರ್ತಿಯಾಗಿ, ಸಮಾಜಸುಧಾರಕಿಯಾಗಿ ದೇಶದಲ್ಲಿ ಹೆಣ್ಣು ಮಕ್ಕಳ ಸಮಾನ ಶಿಕ್ಷಣಕ್ಕಾಗಿ ಶ್ರಮಿಸಿದ ಏಕೈಕ ಮಹಿಳೆ ಎಂದು ತಿಳಿಸಿದರು.
ಉಪನ್ಯಾಸಕರಾದ ಶಿಲ್ಪಾ ಹಿಪ್ಪರಗಿ, ವೀಣಾ ಎಸ್. ಜಲಾದೆ, ಸಂತೋಷಕುಮಾರ ಸಜ್ಜನ, ರಾಜಕುಮಾರ ಶಿಂಧೆ, ಪಾಂಡುರಂಗ ಕುಂಬಾರ, ವೈಷ್ಣವಿ, ಕಾವೇರಿ, ಪ್ರಿಯಾಂಕ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.