ಬೀದರ್: ‘ಸರ್ಕಾರದ ಸುತ್ತೋಲೆ ಪ್ರಕಾರ ರಾಜ್ಯದ ಇತರೆ ಜಿಲ್ಲೆಗಳಲ್ಲಿ ಕನ್ನಡ ನಾಮಫಲಕ ಅಳವಡಿಸಲಾಗುತ್ತಿದೆ. ಆದರೆ, ಜಿಲ್ಲೆಯಲ್ಲಿ ಉದಾಸೀನ ಮಾಡಲಾಗುತ್ತಿದೆ’ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಘಟಕದ ಕಾರ್ಯದರ್ಶಿ ಜಗದೀಶ ಬಿರಾದಾರ ಆರೋಪಿಸಿದರು.
ಅಂಗಡಿ ಮುಂಗಟ್ಟುಗಳ ನಾಮಫಲಕಗಳ ಮೇಲೆ ಶೇ 60ರಷ್ಟು ಕನ್ನಡ ಬರಹ ಇರಬೇಕು. ಆದರೆ, ಜಿಲ್ಲೆಯ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಕಾಳಜಿ ತೋರಿಸುತ್ತಿಲ್ಲ. ಅವರ ಮೇಲೆ ಒತ್ತಡ ಏನಾದರೂ ಇದೆಯಾ? ನೀವು ಕನ್ನಡಿಗರಲ್ವಾ? ಎಂದು ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.
ನಿಮಗೆ ಭಯ ಇದ್ದರೆ ನಮಗೆ ತಿಳಿಸಿ, ಎಲ್ಲರೂ ಕೂಡಿ ಕನ್ನಡ ನಾಮಫಲಕ ಅಳವಡಿಸುವ ಕಾರ್ಯ ಮಾಡೋಣ. ಸಭೆ ಕರೆದು ನಗರಸಭೆ ಆಯುಕ್ತರಿಗೆ ತಿಳಿಸಲು ಹಿಂದೇಟು ಹಾಕುತ್ತಿರುವುದು ಏಕೆ? ಮಾರ್ಚ್ 25ರ ಒಳಗೆ ಅಂಗಡಿ ಮುಂಗಟ್ಟುಗಳ ಮೇಲೆ ಶೇ. 60ರಷ್ಟು ಕನ್ನಡ ನಾಮಫಲಕಗಳು ರಾರಾಜಿಸಬೇಕು. ಇಲ್ಲದಿದ್ದರೆ ನಗರಸಭೆಗೆ ಮುತ್ತಿಗೆ ಹಾಕಿ ಹೋರಾಟ ಮಾಡಲಾಗುವುದು. ಅನ್ಯಭಾಷೆಯ ನಾಮಫಲಕ ಪುಡಿಪುಡಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.