ಸುರಪುರ: ದೌರ್ಜನ್ಯ ತಡೆ ಕಾಯ್ದೆ– 1989ನ್ನು ದುರ್ಬಲಗೊಳಿಸಿರುವುದನ್ನು ವಿರೋಧಿಸಿ ಸೋಮವಾರ ಕರೆ ನೀಡಿದ್ದ ಭಾರತ ಬಂದ್ ಬೆಂಬಲಿಸಿ ದಲಿತಪರ ಸಂಘಟನೆಗಳ ಕಾರ್ಯಕರ್ತರು ಸೋಮವಾರ ನಗರದ ಗಾಂಧಿವೃತ್ತದಲ್ಲಿ ಪ್ರತಿಭಟನೆ ನಡೆಸಿದರು.ಬಂದ್ ಕಾರಣ ವ್ಯಾಪಾರಸ್ಥರು ಬೆಳಿಗ್ಗೆಯಿಂದಲೆ ತಮ್ಮ ಅಂಗಡಿಗಳನ್ನು ಬಂದ್ ಮಾಡಿದ್ದರು. ಮಾರುಕಟ್ಟೆ ಬಿಕೋ ಎನ್ನುತ್ತಿತು. ಸಾರಿಗೆ ಸಂಚಾರ ಎಂದಿನಂತಿತ್ತು. ಶಾಲಾ ಕಾಲೇಜು ಮತ್ತು ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿದವು.ಗೌತಮ ಬುದ್ಧ ವೃತ್ತದಿಂದ ನಗರದ ಪ್ರಮುಖ ರಸ್ತೆಗಳ ಮೂಲಕ ಪ್ರತಿಭಟನಾಕಾರರು ಗಾಂಧಿವೃತ್ತದವರೆಗೆ ಮೆರವಣಿಗೆ ನಡೆಸಿ, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು.
ವಿವಿಧ ಸಂಘಟನೆಗಳ ಮುಖಂಡರು ಮಾತನಾಡಿ, ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಇದುವರೆಗೂ ನೀಡಲಾಗುತ್ತಿದ್ದ ಮೀಸಲಾತಿಯಲ್ಲಿ ಕೇಂದ್ರ ಸರ್ಕಾರ ಸಡಿಲಿಕೆ ತರಲು ಹೊರಟಿರುವುದು ನ್ಯಾಯಸಮ್ಮತವಲ್ಲ. ಇದರಿಂದ ಪರಿಶಿಷ್ಟರು ಇನ್ನಷ್ಟು ಶೋಷಣೆಗೆ ಸಿಲುಕುವ ಸಾಧ್ಯತೆ ಇದೆ. ಅವಕಾಶ ಮತ್ತು ಸೌಲಭ್ಯಗಳಿಂದ ಪರಿಶಿಷ್ಟರನ್ನು ವಂಚಿತರನ್ನಾಗಿ ಮಾಡಿ ಗುಲಾಮಗಿರಿಗೆ ತಳ್ಳುವ ಹುನ್ನಾರು ನಡೆಸಿದೆ’ ಎಂದು ದೂರಿದರು.‘ಈ ನಿರ್ಧಾರವನ್ನು ಕೂಡಲೆ ಕೈ ಬಿಡಬೇಕು. ಇಲ್ಲವಾದಲ್ಲಿ ದೇಶದಾದ್ಯಂತ ದಲಿತರಿಂದ ಉಗ್ರ ಹೋರಾಟ ಎನಡೆಸಲಾಗುತ್ತದೆ ಎಂದು ಎಚ್ಚರಿಸಿ ರಾಷ್ಟ್ರಪತಿಗೆ ಬರೆದ ಮನವಿಯನ್ನು ಗ್ರೇಡ್-2 ತಹಶೀಲ್ದಾರ್ ಸೋಫಿಯಾ ಸುಲ್ತಾನ ಅವರಿಗೆ ಸಲ್ಲಿಸಿದರು.