ಬಸವಕಲ್ಯಾಣ: ‘ಕೋಲಿ ಸಮಾಜವನ್ನು ಟೋಕರಿ ಕೋಲಿ ಎಂದು ಪರಿಗಣಿಸಿ ಪರಿಶಿಷ್ಟ ಪಂಗಡದ ಪ್ರಮಾಣ ಪತ್ರ ನೀಡದೆ ಅನ್ಯಾಯ ಮಾಡಲಾಗುತ್ತಿದೆ’ ಎಂದು ಸಮಾಜದ ಮುಖಂಡ ಶಂಕರರಾವ್ ಜಮಾದಾರ ಶಿವಪುರ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಅಂಬಿಗರ ಚೌಡಯ್ಯ ಭವನದಲ್ಲಿ ಗುರುವಾರ ಆಯೋಜಿಸಿದ್ದ ಸಮಾಜದ ಕುಂದು ಕೊರತೆಗಳ ಚಿಂತನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಸಮಾಜದ ಯುವಕರು ಸಿಂಧುತ್ವ ಪಡೆಯುವುದಕ್ಕೆ ಸಾಕಷ್ಟು ಪರದಾಡುವ ಪರಿಸ್ಥಿತಿ ಇದೆ. ಆದರೂ ಈ ಬಗ್ಗೆ ಯಾರೂ ಚಕಾರ ಎತ್ತುತ್ತಿಲ್ಲ. ಹೀಗಾಗಿ ಸಮಾಜದವರು ಸಂಕಷ್ಟದಲ್ಲಿರುವ ಕಾರಣ ಸಭೆ ಹಮ್ಮಿಕೊಳ್ಳಲಾಗಿದೆ. ಬೇರೆ ದುರುದ್ದೇಶ ಇಲ್ಲ’ ಎಂದು ಸ್ಪಷ್ಟಪಡಿಸಿದರು.
‘ರಾಜ್ಯ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ಹೆಸರಿಗೆ ಮಾತ್ರ ಇದೆ. ಅದಕ್ಕೆ ಅಧ್ಯಕ್ಷರನ್ನು ನೇಮಿಸಿ ₹ 100 ಕೋಟಿ ಅನುದಾನ ಒದಗಿಸಬೇಕು. ಇತರೆ ಸೌಲಭ್ಯಗಳನ್ನು ಸಹ ನೀಡಬೇಕು’ ಎಂದು ಆಗ್ರಹಿಸಿದರು.
ಸಮಾಜ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜಗನ್ನಾಥ ಜಮಾದಾರ ಮಾತನಾಡಿ, ‘ಒಗ್ಗಟ್ಟಿನಿಂದ ಇದ್ದು ಶಕ್ತಿ ಪ್ರದರ್ಶಿಸಿದರೆ ಮಾತ್ರ ಸರ್ಕಾರ ನಮ್ಮ ಕಡೆ ಲಕ್ಷ್ಯ ನೀಡುತ್ತದೆ’ ಎಂದರು.
ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ನಾರಾಯಣರಾವ್ ಮಾತನಾಡಿ, 'ಸಮಾಜದ ಸಮಸ್ಯೆ ಬಗೆಹರಿಸುವುದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ವಿನಂತಿಸುತ್ತೇನೆ’ ಎಂದರು.