ಬೀದರ್: `ನೀರಿನ ಪರಿಣಾಮಕಾರಿ ಬಳಕೆ ಮತ್ತು ಸ್ವ ಉದ್ಯೋಗದ ದೃಷ್ಟಿಯಿಂದ ಯುವಜನರು ತೋಟಗಾರಿಕೆ ನರ್ಸರಿ ಕ್ಷೇತ್ರಗಳತ್ತ ಒಲವು ತೋರಿಸಬೇಕು' ಎಂದು ಜಿಲ್ಲಾಧಿಕಾರಿ ಡಾ.ಪಿ.ಸಿ. ಜಾಫರ್ ಸಲಹೆ ನೀಡಿದರು.
ಇಲ್ಲಿನ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಸೋಮವಾರ `ಸ್ವ ಉದ್ಯೋಗಕ್ಕಾಗಿ ತೋಟಗಾರಿಕೆ ನರ್ಸರಿ ನಿರ್ವಹಣೆ' ಕುರಿತ ತರಬೇತಿ ಶಿಬಿರದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು.
`ತರಬೇತಿ ಪಡೆದವರು ಒಂದು ಗುಂಪಾಗಿ ನರ್ಸರಿ ಅಭಿವೃದ್ಧಿಗೆ ಮುಂದಾದರೆ ವಿವಿಧ ಯೋಜನೆಗಳ ಮೂಲಕ ನೆರವಾಗಲು ಪರಿಶೀಲಿಸಬಹುದು' ಎಂದರು.
`ಜಿಲ್ಲೆಯಲ್ಲಿ ತೋಟಗಾರಿಕೆ ನರ್ಸರಿಗೆ ಉತ್ತಮ ಅವಕಾಶಗಳಿವೆ. ಹೈದರಾಬಾದ್ ಸಮೀಪವಿರುವ ಕಾರಣ ಮಾರುಕಟ್ಟೆ ಸಾಧ್ಯತೆಯೂ ಇದೆ. ಹೆಚ್ಚು ನೀರು ಬಯಸುವ ಕಬ್ಬು ಬೆಳೆಗೆ ಒತ್ತು ನೀಡುವ ಬದಲು ಹೆಚ್ಚಿನ ಲಾಭಾಂಶ ತರುವ, ಕಡಿಮೆ ನೀರು ಬಯಸುವ ನರ್ಸರಿಗೆ ಒತ್ತು ನೀಡಬಹುದು' ಎಂದು ಸಲಹೆ ಮಾಡಿದರು.
`ತೋಟಗಾರಿಕೆ ನರ್ಸರಿ ನಿರ್ವಹಣೆ ತರಬೇತಿ ಪಡೆದವರು, ಇದನ್ನು ಉದ್ಯಮವಾಗಿ ಕೈಗೊಳ್ಳಲು ಮುಂದಾಗಬೇಕು. ತೋಟಗಾರಿಕೆ ಇಲಾಖೆ ನರ್ಸರಿಯಲ್ಲಿ ತಾತ್ಕಾಲಿಕವಾಗಿ ಇವರ ಸೇವೆ ಪಡೆಯುವುದು, ಉದ್ಯೋಗ ಖಾತರಿ ಯೋಜನೆಯಡಿ ನರ್ಸರಿ ಅಭಿವೃದ್ಧಿಗೆ ನೆರವಾಗುವ ಸಾಧ್ಯತೆಗಳನ್ನು ಪರಿಶೀಲಿಸಲಾಗುವುದು' ಎಂದರು.
ಇಂಡೊ ಅಮೆರಿಕನ್ ಹೈಬ್ರೀಡ್ ಸೀಡ್ಸ್ ಸಂಸ್ಥೆಯ ವಿಜಯ್ ಗೋರಿ ಮಾತನಾಡಿ, ನರ್ಸರಿ ಉದ್ಯಮದಲ್ಲಿ ಇರುವ ಅವಕಾಶಗಳ ಬಗೆಗೆ ಮಾಹಿತಿ ನೀಡಿದರು. ಜಂಟಿ ಕೃಷಿ ನಿರ್ದೇಶಕ ಜಿ.ಟಿ.ಪುಥ್ರಾ ಮುಖ್ಯ ಅತಿಥಿಯಾಗಿದ್ದರು.
ತೋಟಗಾರಿಕೆ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಪ್ರವೀಣ್ ಕುಮಾರ್ ಮತ್ತು ಎನ್. ಶ್ರೀನಿವಾಸ್ ಇದ್ದರು. ತರಬೇತಿ ಪಡೆದ 9 ಮಹಿಳೆಯರು ಸೇರಿದಂತೆ 29 ಮಂದಿಗೆ ಪ್ರಮಾಣಪತ್ರ ನೀಡಲಾಯಿತು.