ಬಸವಕಲ್ಯಾಣ: ವೈದ್ಯಕೀಯ ಶಿಕ್ಷಣ ಪಡೆಯದ ಮತ್ತು ಕಾನೂನಿನ ಪ್ರಕಾರ ನೋಂದಣಿ ಮಾಡಿಸದ ನಕಲಿ ವೈದ್ಯರ ಹಾವಳಿ ತಾಲ್ಲೂಕಿನಲ್ಲಿ ಹೆಚ್ಚಾಗಿರುವ ಬಗ್ಗೆ ಇಲ್ಲಿನ ಆರೋಗ್ಯ ಇಲಾಖೆಯ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ತಾಲ್ಲೂಕು ವೈದ್ಯಾಧಿಕಾರಿ ಡಾ. ಶರಣಪ್ಪ ಮುಡಬಿ ಪ್ರಕಟಣೆ ಹೊರಡಿಸಿ ಇಂಥ ನಕಲಿ ವೈದ್ಯರಿಂದ ದೂರ ಇರಬೇಕು ಎಂದು ಎಚ್ಚರಿಸಿದ್ದಾರೆ.
ವೈದ್ಯ ವೃತ್ತಿ ಕೈಗೊಳ್ಳುವವರ ಹತ್ತಿರ ವೈದ್ಯಕೀಯ ಶಿಕ್ಷಣ ಪಡೆದ ಬಗ್ಗೆ ದಾಖಲೆ ಇರಬೇಕು. ಇದಲ್ಲದೆ ಕೆಪಿಎಂಇ ಕಾಯ್ದೆ ಪ್ರಕಾರ ಅವರು ತಮ್ಮ ಹೆಸರನ್ನು ಆರೋಗ್ಯ ಇಲಾಖೆಯಲ್ಲಿ ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯ ಎಂದಿದ್ದಾರೆ. ಒಂದು ವೇಳೆ ಯಾರಾದರೂ ವೈದ್ಯಕೀಯ ಶಿಕ್ಷಣ ಪಡೆದಿದ್ದರೂ ನೋಂದಣಿ ಮಾಡಿಸದಿದ್ದರೆ ತಕ್ಷಣ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ಆಗುಹೋಗುಗಳಿಗೆ ಅವರೆ ಜವಾಬ್ದಾರರು ಆಗಬೇಕಾಗುತ್ತದೆ ಎಂದು ಹೇಳಿದ್ದಾರೆ.