ಹುಮನಾಬಾದ್: ಸರ್ಕಾರಿ ಸೇವೆಯಲ್ಲಿ ವರ್ಗವಣೆ, ಪದನ್ನೋತಿಗಳು ಸಾಮಾನ್ಯ. ಎಷ್ಟು ವರ್ಷ ಸೇವೆ ಸಲ್ಲಿಸಿದೆ ಎನ್ನುವುದಕಿಂತಲೂ ಹೇಗೆ ಸೇವೆ ಸಲ್ಲಿಸಿದೆ ಎನ್ನುವುದು ಪ್ರಮುಖ. ವೇತನ ಪಡೆಯುವ ಪ್ರತಿಯೊಬ್ಬ ಅಧಿಕಾರಿ ಯಲ್ಲಿ ಸೇವಾ ಬದ್ಧತೆ ಇರಬೇಕು ಎಂದು ವರ್ಗಾವಣೆಗೊಂಡ ವಲಯ ಅರಣ್ಯ ಅಧಿಕಾರಿ ಎ.ಬಿ.ಪಾಟೀಲ ಅಭಿಪ್ರಾಯಪಟ್ಟರು.
ನಗರದಲ್ಲಿ ಸೋಮವಾರ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ, ಅವರು ಮಾತನಾಡಿದರು.
ಒತ್ತುವರಿಗೊಂಡಿದ್ದ ಇಲಾಖೆ ಭೂಮಿಯನ್ನು ಸಿಬ್ಬಂದಿ ಸಹಕಾರದಿಂದ ತೆರವುಗೊಳಿಸುವುದರ ಜೊತೆಗೆ ನೆಡುತೋಪು ನೆಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಸರ್ಕಾರ ನೀಡುವ ವೇತನಕ್ಕೆ ನಿವೃತ್ತಿಗೂ ಮುನ್ನ ಜನ ಶಾಶ್ವತ ಗುರುತಿಸುವಂಥ ಕೆಲಸ ಮಾಡಲು ಪ್ರತಿಯೊಬ್ಬರೂ ಯತ್ನಿಸಬೇಕು ಎಂದರು.
ಮುಖ್ಯ ಅತಿಥಿಯಾಗಿದ್ದ ಬಸವಕಲ್ಯಾಣ ಸಹಾಯಕ ಅರಣ್ಯ ಅಧಿಕಾರಿ ಕೆ.ಬಿ ಶ್ರೀನಿವಾಸ ಮಾತನಾಡಿ, ಸರ್ಕಾರಿ ಸೇವೆಯಲ್ಲಿ ಎಲ್ಲವೂ ನಾವು ಬಯಸಿದಂತಾಗುವುದು ಕಷ್ಟಸಾಧ್ಯ. ಇದ್ದುದರಲ್ಲೇ ಜನ ಮೆಚ್ಚುವಂಥ ಕೆಲಸ ಮಾಡಬೇಕು ಎಂದರು.
ಹುಮನಾಬಾದ್ಗೆ ಹೊಸದಾಗಿ ಆಗಮಿಸಿರುವ ಎಂ.ಎಂ ಕಲ್ಮಠ್ ಪಾಟೀಲರಿಗೆ ನೀಡಿದ ಸಹಕಾರ ತಮಗೂ ನೀಡಿ, ಜನ ಹಾಗೂ ಮೇಲಧಿ ಕಾರಿಗಳ ನಿರೀಕ್ಷೆಯಂತೆ ಉತ್ತಮ ಸೇವೆ ನೀಡಲು ಯತ್ನಿಸುವುದಾಗಿ ತಿಳಿಸಿದರು.
ರಾಷ್ಟ್ರದ ಸಂಪತ್ತು ಸಂರಕ್ಷಿಸುವ ವಿಷಯದಲ್ಲಿ ಅಧಿಕಾರಿಗಳು ನಿರ್ಭಯ ವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾ ಪರಿಸರ ವಾಹಿನಿ ಅಧ್ಯಕ್ಷ ಶೈಲೇಂದ್ರ ಕಾವಡಿ ಸಲಹೆ ನೀಡಿದರು. ಗೋಪಿನಾಥ, ನಾರಾಯಣರಾವ, ಎ.ಆರ್.ಪೂಜಾರಿ ಇದ್ದರು.