ಚಿಟಗುಪ್ಪಾ: ಅವಶ್ಯಕತೆ ಸಂಶೋಧನೆಯ ತಾಯಿ ಬೇರು ಎಂಬಂತೆ, ಬಾಲ್ಯದಿಂದಲೇ ಹಲವು ಸಮಸ್ಯೆಗಳಲ್ಲಿ ಬದುಕು ಸಾಗಿಸುತ್ತಿದ್ದ ಯುವಕ ಹೈನುಗಾರಿಯ ಹವ್ಯಾಸ ಬೆಳೆಸಿಕೊಂಡು ಬಿ.ಕಾಂ ಪದವಿ ವರೆಗೂ ಶಿಕ್ಷಣ ಮುಗಿಸಿ, ಉದ್ಯೋಗಕ್ಕಾಗಿ ಹವಣಿಸದೆ, ಸಂಸಾರದ ಜವಾಬ್ದಾರಿ ತನ್ನ ತಲೆಯ ಮೇಲೆ ಬಂದಾಗ, ಬದುಕಿನ ವಾಸ್ತವಿಕ ಜಗತ್ತಿನ ಅರಿವು ಮೂಡುತ್ತಿದ್ದಂತೆ ಹವ್ಯಾಸವೇ ವೃತ್ತಿಯನ್ನಾಗಿಸಿಕೊಂಡು, ದಿನಾಲೂ ಪುಟ್ಟದಾಗಿ ಹೈನುಗಾರಿ ಆರಂಭಿಸಿದ ಇಂದು ತನ್ನ ಗ್ರಾಮದಲ್ಲಿ ನಂಬರ್ ವನ್..! ರೈತನಾಗಿ ರೂಪುಗೊಂಡ ಕಥೆಯ ಯಶೋಗಾಥೆ ಬೀದರ್ ಜಿಲ್ಲೆ ಹುಮನಾಬಾದ್ ತಾಲ್ಲೂಕಿನ ನಿರ್ಣಾ ಗ್ರಾಮದ ಅನೀಲರೆಡ್ಡಿ ಶಿವಾರೆಡ್ಡಿ ಲಚ್ಚನಗಾರ ಎಂಬುವರದ್ದಾಗಿದೆ.
40 ವರ್ಷದ ಇವರು ಸಧ್ಯ ಪ್ರತಿದಿನ ಗ್ರಾಮದ ಹಾಲೂ ಒಕ್ಕೂಟದ ಸಹಕಾರಿ ಸಂಘದಲ್ಲಿ 60 ಲೀಟರ್ ಹಾಲು ಸರಬರಾಜು ಮಾಡುತ್ತಿದ್ದು, ಒಕ್ಕೂಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ತನ್ನ ತೋಟದಲ್ಲಿ ಜರ್ಸಿ (ಕ್ರಾಸ್ ಬಿಡಿಂಗ್) ತಳಿಯ 10 ಆಕಳು ಸಾಕಿದ್ದು, ಅವುಗಳ ಆರೈಕೆಗಾಗಿ ಇಬ್ಬರು ಕೃಷಿ ಕಾರ್ಮಿಕರನ್ನು ನೇಮಿಸಿದ್ದಾರೆ.
ಪ್ರತಿ ದಿನ ಇವರೆ ಬೆಳಗ್ಗೆ ಸಂಜೆ ಹಾಲು ಕರೆಯುತ್ತಾರೆ. ಹಸುಗಳಿಗೆ 4ಎಕರೆ ಭೂಮಿಯಲ್ಲಿ ಗುಜರಾತ ಹಾಗೂ ಗಿನಿ ತಳಿಯ ಹುಲ್ಲು ಬೆಳೆಸಿದ್ದಾರೆ, ಏದಿನಾಲೂ ಆಕಳುಗಳಿಗೆ ಒಂದು ಹೊತ್ತು ಗೋದ್ರೇಜ್ ಫೀಡ್, ಒಂದು ಹೊತ್ತು ಕಣಕಿ, ಎರಡು ಹೊತ್ತು ಗಿನಿ ಗುಜರಾತ ತಳಿಯ ಹುಲ್ಲು ಆಹಾರವಾಗಿ ಕೊಡಲಾಗುತ್ತದೆ ಇವುಗಳಿಂದ ಹಾಲಿನ ಉತ್ಪಾದನಾ ಪ್ರಮಾಣ ಹೆಚ್ಚುತ್ತದೆ ಎಂದು ಹೇಳುತ್ತಾರೆ.
ಪ್ರತಿ ದಿನ ಬೆಳಿಗ್ಗೆ ಸಂಜೆ 2 ಗಂಟೆ ದುಡಿಯುತ್ತೇನೆ ತಿಂಗಳಿಗೆ ನಿವ್ವಳ ಆದಾಯ ಕನಿಷ್ಠ 40 ಸಾವಿರ ರೂಪಾಯಿವರೆಗೂ ಪಡೆಯುತ್ತಿದ್ದೇನೆ, ವರ್ಷಕ್ಕೆ ಹಸುಗಳ ಸಗಣಿಯಿಂದ ಉತ್ಪನ್ನವಾಗುವ ಕನಿಷ್ಠ 50 ಟನ್ ವರೆಗಿನ ಜೈವಿಕ ಗೊಬ್ಬರ ತೋಟಕ್ಕೆ ಬಳಸುವುದರಿಂದ ಭೂಮಿಯ ಫಲವತ್ತತೆ ಹೆಚ್ಚುತ್ತಿದೆ. ಮಾವು, ಮೋಸಂಬಿ, ಕಬ್ಬು ಇತರ ವಾಣಿಜ್ಯ ಬೆಳೆಗಳಿಂದ ಸಮೃದ್ಧವಾಗಿ ಇಳುವರಿ ಪಡೆಯುತ್ತಿದ್ದು, ರೈತರು ಆರ್ಥಿಕವಾಗಿ ಸ್ವಾವಲಂಬಿ ಬದುಕು ಸಾಗಿಸಲು ಹೈನುಗಾರಿಕೆ ಉಪ ಕಸುಬನ್ನಾಗಿ ಮಾಡಿಕೊಂಡಲ್ಲಿ ಖಂಡಿತ ರೈತರ ಬದುಕು ಹಸನಾಗುತ್ತದೆ ಎಂಬ ಅನೀಲರೆಡ್ಡಿ ಅವರ ಅನುಭವದ ಅಂತರಾಳದ ಮಾತುಗಳು ಸರ್ವರಿಗೂ ದಾರಿ ದೀಪವಾಗಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.