ಔರಾದ್: ಕಳೆದ ಎರಡು ದಿನಗಳಿಂದ ತಾಲ್ಲೂಕಿನಾದ್ಯಂತ ಎಡಬಿಡದೆ ಸುರಿದ ಭಾರಿ ಮಳೆಯಿಂದಾಗಿ ಅಪಾರ ಪ್ರಮಾಣದ ಹಾನಿ ಆಗಿದೆ.
ಪ್ರತಿವರ್ಷದಂತೆ ಈ ವರ್ಷವೂ ಪ್ರಕೃತಿ ರೈತನ ಜೋತೆ ಚಲ್ಲಾಟವಾಡುತ್ತಿದೆ. ಮುಂಗಾರು ಆರಂಭದಲ್ಲಿ ಮಳೆ ತಡವಾಗಿ ಬಂದ ಕಾರಣ ತಾಲ್ಲೂಕಿನಲ್ಲಿ ಶೇ. 30 ಪ್ರತಿಶತ ಬಿತ್ತನೆಯಾಗಿಲ್ಲ. ಸಮಯಾನುಸಾರ ಮಳೆಯಾಗದೆ ಉದ್ದು ಹೆಸರಿನ ಬಿತ್ತನೆ ಪ್ರಮಾಣ ತೀರಾ ಕಡಿಮೆಯಾಗಿದೆ. ಈ ಸಲ ಎಲ್ಲ ರೈತರು ಸೋಯಾಗೆ ಮೊರೆ ಹೋಗಿದ್ದಾರೆ. ಆದರೆ ಕೆಲವೆಡೆ ಸೋಯಾ ಮೊಳಕೆ ಮೇಲೆ ಬಂದಿಲ್ಲ ಎಂಬ ದೂರುಗಳಿವೆ. ಈ ನಡುವೆ ಕೆಲಕಡೆ ದೋಷಪೂರಿತ ಕ್ರಿಮಿನಾಶಕ ಸಿಂಪರಣೆಯಿಂದ ಬೆಳೆ ಸುಟ್ಟುಹೋಗಿದೆ. ಅಳಿದುಳಿದ ಸೋಯಾ, ತೋಗರಿ ಮತ್ತು ಜೋಳ ಈ ಮಳೆಗೆ ಹಾಳಾಗಿದೆ ಎಂದು ರೈತ ಶ್ರೀಮಂತ ಬಿರಾದಾರ ಗೋಳು ತೋಡಿಕೊಂಡಿದ್ದಾರೆ.
ತಾಲ್ಲೂಕಿನ ಬಹುತೇಕ ರೈತರು ಮುಂಗಾರು ಬೆಳೆ ಮೇಲೆ ಅವಲಂಬಿಸಿದ್ದಾರೆ. ಈ ಮಳೆಯಿಂದ ಮುಂಗಾರು ಬೆಳೆ ಹಾಳಾಗಿದೆ. ಸಾಲ ಮಾಡಿ ಕಷ್ಟುಪಟ್ಟು ಬೆಳೆಸಿದ ಬಳೆ ರೈತನ ಕೈಗೆ ಸಿಗದೆ ಸಂಕಷ್ಟದಲ್ಲಿ ಸಿಲುಕಿದ್ದಾರೆ.
ಕಳೆದ ತಿಂಗಳು ಮುಂಗನಾಳ ಮತ್ತು ಸುತ್ತಲೂ ಸುರಿದ ಭಾರಿ ಮಳೆಗೆ ಬಹಳಷ್ಟು ಹಾನಿಯಾಗಿದೆ. ಈ ಬಗ್ಗೆ ಕಂದಾಯ ಅಧಿಕಾರಿಗಳು ಸರ್ವೆ ಮಾಡಿಕೊಂಡು ಹೋಗಿದ್ದಾರೆ. ರೈತರು ಪರಿಹಾರದ ನಿರೀಕ್ಷೆಯಲ್ಲಿದ್ದಾರೆ ಎಂದು ಎಪಿಎಂಸಿ ಸದಸ್ಯ ಗೋವಿಂದ ಇಂಗಳೆ ತಿಳಿಸಿದ್ದಾರೆ.
ಹಾಳಾದ ರಸ್ತೆ: ಭಾರಿ ಮಳೆಯಿಂದಾಗಿ ತಾಲ್ಲೂಕಿನ ವಿವಿಧೆಡೆ ರಸ್ತೆಗಳು ಹಾಳಾಗಿವೆ. ಡೋಣಗಾಂವ್ ಸೇರಿದಂತೆ ಕೆಲವೆಡೆ ಸೇತುವೆಗಳು ಕುಸಿದು ಸಂಪರ್ಕ ಕಡಿತಗೊಂಡಿದೆ. ಈ ಬಗ್ಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕಾಳಜಿ ವಹಿಸಿ ಬೆಳೆ ಹಾಳಾದ ರೈತರಿಗೆ ಸೂಕ್ತ ಪರಿಹಾರ ಕೊಡಿಸಬೇಕು. ಹಾಳಾದ ರಸ್ತೆ ಮತ್ತು ಸೇತುವೆ ಕೂಡಲೇ ದುರಸ್ತಿ ಮಾಡಿಸುವಂತೆ ತಾಲ್ಲೂಕಿನ ಜನ ಒಕ್ಕೊರಲಿನ ಬೇಡಿಕೆ ಮಂಡಿಸಿದ್ದಾರೆ.