ಬೀದರ್: ಮತದಾನದ ಮಹತ್ವ ಕುರಿತು ಯುವಜನರಲ್ಲಿ ಜಾಗೃತಿ ಮೂಡಿಸುವ `ಯುವ ಜಾಗೃತಿ ಪ್ರಚಾರ ಆಂದೋಲನ' ಕಾರ್ಯಕ್ರಮ ಮಂಗಳವಾರ ಮುಂಜಾನೆ ಬರೀದ್ ಶಾಹಿ ಉದ್ಯಾನದಲ್ಲಿ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ ನಡೆಯಿತು.
`ಜನ ಪ್ರತಿನಿಧಿಗಳ ಆಯ್ಕೆಗಾಗಿ ನಡೆಯುವ ಮತದಾನ ಪ್ರಕ್ರಿಯೆಯಲ್ಲಿ ಯುವ ಮತದಾರರ ಪಾತ್ರ ಮಹತ್ವದಾಗಿದೆ' ಎಂದು ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ಶಿವಯ್ಯ ಸ್ವಾಮಿ ಅಭಿಪ್ರಾಯಪಟ್ಟರು. `ಯುವ ಮತದಾರರು ಮತದಾನ ಪ್ರಕ್ರಿಯೆಯಲ್ಲಿ ನಿಷ್ಪಕ್ಷಪಾತವಾಗಿ ಪಾಲ್ಗೊಂಡು ನಾಡಿನ ಹಾಗೂ ಕ್ಷೇತ್ರದ ಅಭಿವೃದ್ಧಿಗಾಗಿ ತಪ್ಪದೇ ತಮ್ಮ ಮತದಾನ ಹಕ್ಕು ಚಲಾಯಿಸಬೇಕು. ಜೊತೆಗೆ ಹಿರಿಯರಲ್ಲಿಯೂ ಮತದಾನದ ಮಹತ್ವ ಕುರಿತು ಜಾಗೃತಿ ಮೂಡಿಸಬೇಕು' ಎಂದು ಸಲಹೆ ಮಾಡಿದರು.
`ಗ್ರಾಮೀಣ ಭಾಗದ ಮಹಿಳೆ ಹಾಗೂ ಹಿರಿಯ ಮತದಾರರಲ್ಲಿ ಚುನಾವಣೆಯಲ್ಲಿ ಮತ ಚಲಾಯಿಸುವು ನಿಮ್ಮ ಕರ್ತವ್ಯವಾಗಿದೆ. ಪ್ರಮಾಣಿಕವಾಗಿ ಮತಾಧಿಕಾರ ಚಲಾಯಿಸುವ ಮೂಲಕ ಉತ್ತಮ ಪ್ರತಿನಿಧಿಯನ್ನು ಆಯ್ಕೆ ಮಾಡುವಂತೆ ಅರಿವು ಮೂಡಿಸಬೇಕು' ಎಂದು ಕರೆ ನೀಡಿದರು.
`ಯುವ ಮತದಾರರು ಈ ಚುನಾವಣೆಯಲ್ಲಿ ಪ್ರಾಮಾಣಿಕವಾಗಿ ಮತ ಚಲಾಯಿಸಿದರೆ ಮಾತ್ರ ನಾಡಿನ ಹಾಗೂ ಕ್ಷೇತ್ರದ ಅಭಿವೃದ್ಧಿಯಾಗಲು ಸಾಧ್ಯ' ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಸಿದ್ರಾಮಯ್ಯ ಸ್ವಾಮಿ ಹೇಳಿದರು.
ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ರವಿರಾಜ್ ಅಧ್ಯಕ್ಷತೆ ವಹಿಸಿದ್ದರು. ಯುವಜನ ಸೇವಾ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಎಚ್.ಬಿ. ಭರಶೆಟ್ಟಿ, ಜಿಲ್ಲಾ ಯುವ ಸಂಘಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ರಾಜಕುಮಾರ್ ಹೆಬ್ಬಾಳೆ ಇದ್ದರು.