ಹುಮನಾಬಾದ್: ನನೆಗುದಿಗೆ ಬಿದ್ದ ಇಲ್ಲಿನ ಸಹಾಯಕ ಸಾರಿಗೆ ಅಧಿಕಾರಿ ಕಚೇರಿ ನೂತನ ಕಟ್ಟಡ ಉದ್ಘಾಟನೆ ಡಿ. 22ರೊಳಗೆ ನೆರವೇರಿಸಲಾಗುವುದು ಎಂದು ಶಾಸಕ ರಾಜಶೇಖರ ಬಿ. ಪಾಟೀಲ ತಿಳಿಸಿದರು. ಕಚೇರಿ ಕಟ್ಟಡ ಉದ್ಘಾಟನೆ ನನೆಗುದಿಗೆ ಬಿದ್ದ ಸಂಬಂಧ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಗುರುವಾರ ಸ್ಥಳಕ್ಕೆ ಭೇಟಿ ನೀಡಿದರು.
ವಿದ್ಯುತ್ ಸಂಪರ್ಕ, ಪ್ರಾಂಗಣ ಸಮತಲಗೊಳಿಸುವುದು ಸೇರಿದಂತೆ ಸಣ್ಣಪುಟ್ಟ ಕೆಲಸಗಳು ಬಾಕಿ ಉಳಿದಿದ್ದು, ಉದ್ಘಾಟನೆಗೂ ಮುನ್ನ ಎಲ್ಲ ಕೆಲಸಗಳು ಪೂರ್ಣಗೊಳಿಸಲಾಗುವುದು. ಉದ್ಘಾಟನೆ ನೆರವೇರಿಸುವ ಸಂಬಂಧ ಸಾರಿಗೆ ಸಚಿವರನ್ನು ಸಂಪರ್ಕಿಸಿದ್ದು, ಡಿ. 20 ಅಥವಾ 21ಕ್ಕೆ ಆಗಮಿಸುವುದಾಗಿ ತಿಳಿಸಿದ್ದಾರೆ ಎಂದು ತಿಳಿಸಿದರು.
ಡಿ. 31ರೊಳಗೆ ರೈಲು ಸಂಚಾರ: ರೈಲು ಸಂಚಾರಕ್ಕೆ ಚಾಲನೆ ನೀಡುವ ಕಾರ್ಯಕ್ರಮ ಅಕ್ಟೋಬರ್ 2ಕ್ಕೆ ನಡೆಯಬೇಕಿತ್ತು. ರೈಲು ಸಂಚಾರಕ್ಕೆ ಹಳಿ ಸಮತಲಗೊಳಿಸುವುದು ಮೊದಲಾದ ತಾಂತ್ರಿಕ ಅಡಚಣೆ ಇರುವುದಾಗಿ ಇಲಾಖೆ ಹಿರಿಯ ಅಧಿಕಾರಿಗಳು ತಿಳಿಸಿದ್ದರು. ಆ ಕಾರಣಕ್ಕಾಗಿ ಉದ್ಘಾಟನಾ ಸಮಾರಂಭ ವಿಳಂಬಗೊಂಡಿತ್ತು.
ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಂಪರ್ಕಿಸಿದ್ದು, ಈ ತಿಂಗಳ ಕೊನೆ ವಾರದಲ್ಲಿ ಕಾರ್ಯಕ್ರಮಕ್ಕೆ ಬರಲು ಒಪ್ಪಿಗೆ ಸೂಚಿಸಿದ್ದಾರೆ. ದಿನಾಂಕ ನಿಗದಿ ಮಾತ್ರ ಬಾಕಿ ಉಳಿದಿದೆ ಎಂದು ಹೇಳಿದರು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪಿ.ನಾಗಪ್ಪ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಶಿವರಾಜ ಗಂಗಶೆಟ್ಟಿ, ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ಕಂಟೆಪ್ಪ ದಾನಾ, ಸಾರಿಗೆ ಅಧಿಕಾರಿ ಗಿರಿಧರ, ಸಿಬ್ಬಂದಿ ಎಕ್ಬಾಲ್, ನರಸಿಂಹ, ವೈಜಿನಾಥರಾವ, ಶ್ರೀಮಂತ, ಪೊಲೀಸ್ ಅಧಿಕಾರಿಗಳು ಇದ್ದರು. ಕಚೇರಿ ಕಟ್ಟಡ ಉದ್ಘಾಟನೆಯಾಗದ ಕುರಿತು ‘ಪ್ರಜಾವಾಣಿ’ ಯಲ್ಲಿ ಸುದ್ದಿ ಪ್ರಕಟವಾಗಿತ್ತು.