ಬೀದರ್: ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಪುಣ್ಯಸ್ಮರಣೆ ನಿಮಿತ್ತ ಡಿಸೆಂಬರ್ 15 ರಂದು ನಗರದಲ್ಲಿ ‘ಏಕತಾ ಓಟ’ ಆಯೋಜಿಸಲಾಗಿದೆ ಎಂದು ಲೋಹ ಸಂಗ್ರಹಣಾ ಸಮಿತಿ ಜಿಲ್ಲಾ ಸಂಚಾಲಕ ಪ್ರಕಾಶ್ ಟೊಣ್ಣೆ ತಿಳಿಸಿದರು. ಏಕತಾ ಓಟ ಅಂದು ಬೆಳಿಗ್ಗೆ 8 ಗಂಟೆಗೆ ನಗರದ ಬರೀದ್ಶಾಹಿ ಉದ್ಯಾನದಿಂದ ಆರಂಭಗೊಂಡು ಮಡಿವಾಳೇಶ್ವರ ವೃತ್ತ, ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತದ ಮೂಲಕ ಶಿವಾಜಿ ವೃತ್ತದ ಬಳಿ ಸಮಾರೋಪಗೊಳ್ಳಲಿದೆ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಹಿರಿಯ ಸ್ವಾತಂತ್ರ್ಯ ಸೇನಾನಿಯೊಬ್ಬರನ್ನು ಉದ್ಘಾಟನೆಗೆ ಆಹ್ವಾನಿಸಲು ನಿರ್ಧರಿಸಲಾಗಿದೆ. ಸುಮಾರು ಮೂರು ಸಾವಿರಕ್ಕೂ ಹೆಚ್ಚು ಜನ ಓಟದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ತಿಳಿಸಿದರು. ಗುಜರಾತ್ನ ನರ್ಮದಾ ನದಿ ಸಮೀಪ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ 182 ಮೀಟರ್ ಎತ್ತರದ ಪ್ರತಿಮೆ ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಪ್ರತಿಮೆ ವಿಶ್ವದಲ್ಲೇ ಅತಿ ಎತ್ತರ ಪ್ರತಿಮೆ ಆಗಲಿದೆ ಎಂದು ಹೇಳಿದರು.
ವಲ್ಲಭಬಾಯಿ ಪಟೇಲ್ ಅವರ ಬಗ್ಗೆ ಯುವ ಪೀಳಿಗೆಯಲ್ಲಿ ಜಾಗೃತಿ ಮೂಡಿಸಲು ಏಕತಾ ಓಟ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತಿದೆ. ಡಿಸೆಂಬರ್ 15 ರಂದು ದೇಶದ ಸಾವಿರಕ್ಕೂ ಅಧಿಕ ಪಟ್ಟಣಗಳಲ್ಲಿ ಏಕಕಾಲಕ್ಕೆ ನಡೆಯಲಿರುವ ಏಕತಾ ಓಟ ಹೊಸ ದಾಖಲೆ ಸೃಷ್ಟಿಸಲಿದೆ ಎಂದರು.