ಯಳಂದೂರು: ಸಂವಿಧಾನ ತಳಹದಿಯ ಮೇಲೆ ಸಹಬಾಳ್ವೆ ನಡೆಸುವುದು ಭಾರತೀಯರೆಲ್ಲರ ಕರ್ತವ್ಯ ಎಂದು ಶಾಸಕ ಎಸ್. ಜಯಣ್ಣ ಅಭಿಪ್ರಾಯಪಟ್ಟರು. ಅವರು ಶುಕ್ರವಾರ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ 69ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಅಸಮಾನತೆ, ಅಜ್ಞಾನ, ಕಂದಾಚಾರಗಳನ್ನು ನೀಗಿಸಿ ಸಹಬಾಳ್ವೆ, ಸಹೋದರತೆ ಹಾಗೂ ಸಮಾನತೆಗಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನ ರೂಪಿಸಿದ್ದಾರೆ. ಪುರೋಹಿತಶಾಹಿ ಕಪಿಮುಷ್ಟಿಯಿಂದ ತುಳಿತಕ್ಕೆ ಒಳಗಾದವರು ಮೇಲೇಳಲು ಹಾಗೂ ಸರ್ವರಿಗೂ ಸಾಮಾಜಿಕ ನ್ಯಾಯ ಒದಗಿಸುವ ಏಕೈಕ ಧರ್ಮಗ್ರಂಥ ಸಂವಿಧಾನ ಎಂದರು.
ಪ್ರಾಧ್ಯಾಪಕ ಪ್ರಕಾಶಮೂರ್ತಿ ಮಾತನಾಡಿ, ‘ಇಂದು ಸಂವಿಧಾನದ ಅಡಿಯಲ್ಲಿ ಎಲ್ಲಾ ವರ್ಗದವರಿಗೂ ಮೀಸಲಾತಿ ಲಭಿಸಿದೆ. ರಾಷ್ಟ್ರದ ಅಭಿವೃದ್ಧಿಯ ಮುನ್ನುಡಿ ಇದರಲ್ಲಿ ಕಾಣಬಹುದು. ಇಂದು ಸಂವಿಧಾನವನ್ನೇ ತಿರುಚುವ ಬಗ್ಗೆ ಮಾತನಾಡುವ ಇಲ್ಲವೇ ಅನಾಗರಿಕರಂತೆ ವರ್ತಿಸುವ ಮೂಲಕ ತಮ್ಮ ಅಜ್ಞಾನ ಪ್ರದರ್ಶಿಸುತ್ತಿದ್ದಾರೆ’ ಎಂದರು. ತಾ.ಪಂ ಸದಸ್ಯ ನಾಗರಾಜು ಮಾತನಾಡಿದರು.
ಜಿ.ಪಂ ಉಪಾಧ್ಯಕ್ಷ ಜೆ. ಯೋಗೇಶ್, ಸದಸ್ಯೆ ಉಮಾವತಿ ಸಿದ್ದರಾಜು, ತಾ.ಪಂ ಅಧ್ಯಕ್ಷ ನಂಜುಂಡಯ್ಯ, ಉಪಾಧ್ಯಕ್ಷೆ ಪದ್ಮಾವತಿ ಮಹದೇವನಾಯಕ, ಸದಸ್ಯರಾದ ನಿಂರಂಜನ್, ಸಿದ್ದರಾಜು, ನಾಗರಾಜು, ಪುಟ್ಟು, ಭಾಗ್ಯ ನಂಜಯ್ಯ, ಮಲ್ಲಾಜಮ್ಮ ನಂಜಯ್ಯ, ಪಲ್ಲವಿ ಮಹೇಶ್, ಪ.ಪಂ ಅಧ್ಯಕ್ಷ ನಿಂಗರಾಜು, ಉಪಾಧ್ಯಕ್ಷ ಭೀಮಪ್ಪ ಇದ್ದರು.