ಕೊಳ್ಳೇಗಾಲ: ಜಿಲ್ಲಾಡಳಿತದಿಂದ ಸಾಮೂಹಿಕ ಪ್ರಾಣಿ ಬಲಿ ನಿಷೇಧ ಹಾಗೂ ವಿಶ್ವ ಪ್ರಾಣಿ ಕಲ್ಯಾಣ ಮಂಡಳ ರ್ಯಾಲಿ, ಕರಪತ್ರ ವಿತರಣೆ, ಅರಿವು ಉಪನ್ಯಾಸದ ನಡುವೆಯೂ ಲಕ್ಷಾಂತರ ಸಿದ್ದಪ್ಪಾಜಿ ಭಕ್ತರು ಚಿಕ್ಕಲ್ಲೂರು ಜಾತ್ರೆಯಲ್ಲಿ ತೆರೆಮರೆಯಲ್ಲಿ ಪ್ರಾಣಿಬಲಿ ನಡೆಸಿ ಲಕ್ಷಾಂತರ ಭಕ್ತರು ಬಾಡೂಟ ಸವಿದರು.
ಜ.9ರಿಂದ ಚಿಕ್ಕಲ್ಲೂರು ಗ್ರಾಮದಲ್ಲಿ ಶುಭಾರಂಭ ಗೊಂಡ ಜಾತ್ರೆಗೆ ಗುರುವಾರ ಪಂಕ್ತಿ ಸೇವೆ ಪ್ರಯುಕ್ತ ಬಸ್ಸು, ಕಾರು, ಲಾರಿ. ಟೆಂಪೋ, ಅತಿಹೆಚ್ಚು ಗೂಡ್ಸ್ ಆಟೋ, ಟ್ರಾಕ್ಟರ್ ಸೇರಿದಂತೆ ದ್ವಿಚಕ್ರವಾಹನಗಳಲ್ಲಿ ಆಗಮಿಸಿದ ಲಕ್ಷಾಂತರ ಭಕ್ತರು ದೇವಾಲಯದ ಸುತ್ತಮುತ್ತಲ ರೈತರ ಜಮೀನುಗಳಲ್ಲಿ ಬೀಡುಬಿಟ್ಟಿದ್ದರು.
ತಲೆತಲಾಂತರಗಳಿಂದ ನಡೆದುಕೊಂಡು ಬಂದಿರುವ ಭಕ್ತರು ಧೂಳನ್ನೂ ಲೆಕ್ಕಿಸದೆ, ನೀಲಗಾರರ ಸಂಪ್ರದಾಯಿಕ ವಿಧಿ ವಿಧಾನಗಳೊಡನೆ ಸಿದ್ದಪ್ಪಾಜಿ ಜಾತ್ರೆಯಲ್ಲಿ ಪಾಲ್ಗೊಂಡು ಪೂಜೆ ಸಲ್ಲಿಸಿ ಹರಕೆಗಳನ್ನು ತೀರಿಸಿದರು. ರಾಜ್ಯದ ವಿವಿಧ ಮೂಲೆಗಳಿಂದ ಬಂದ ಭಕ್ತರು ನೆತ್ತಿಮೇಲೆ ಸುಡುಬಿಸಿಲಿನ ಝಳದ ನಡುವೆ ಮಣ್ಣಿನ ದೂಳಿನ ಸ್ನಾನದೊಡನೆ ಪೂಜೆ ಸಲ್ಲಿಸಿದರು. ದೇವರ ಪೂಜೆಗೆ ನೂಕುನುಗ್ಗಲು ಉಂಟಾಗಿ ಪೊಲೀಸರು ಭಕ್ತರನ್ನು ನಿಯಂತ್ರಿಸಲು ಹರಸಾಹಸ ಪಡುವಂತಾಗಿತ್ತು.
ಜಾತ್ರೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ ಭಕ್ತರನ್ನು ಚಿಕ್ಕಲ್ಲೂರಿಗೆ ಕರೆದೊಯ್ಯಲು ಕೊಳ್ಳೇಗಾಲದಿಂದ ಖಾಸಗಿ ಬಸ್ಗಳು ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ಗಳು ಬಿರುಸಿನಿಂದ ಸಂಚರಿಸಿದವು. ಡಿ.ವೈ.ಎಸ್.ಪಿ. ಮಹದೇವಯ್ಯ ಅವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.