ಸಂತೇಮರಹಳ್ಳಿ: ವಿದ್ಯಾರ್ಥಿ ದೆಸೆಯಿಂದಲೇ ಜವಾಬ್ದಾರಿ ಅರಿತರೆ ಸಮುದಾಯದಲ್ಲಿ ಬದಲಾವಣೆ ತರಲು ಸಾಧ್ಯ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನಾಗಶ್ರೀ ತಿಳಿಸಿದರು.
ಉಮ್ಮತ್ತೂರಿನಲ್ಲಿ ಕುದೇರು ಎಂ.ಸಂಗಶೆಟ್ಟಿ ಪದವಿ ಪೂರ್ವ ಕಾಲೇಜು ವತಿಯಿಂದ ಮಂಗಳವಾರ ನಡೆದ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಗ್ರಾಮಗಳಲ್ಲಿ ಸೇವೆ ಸಲ್ಲಿಸಬೇಕು. ಮನೆ ಮನೆಗೆ ತೆರಳಿ ಸ್ವಚ್ಛತೆ, ನೈರ್ಮಲ್ಯ, ಪರಿಸರದ ಬಗ್ಗೆ ಅರಿವು ಮೂಡಿಸಬೇಕು. ಬಯಲು ಬಹಿರ್ದೆಸೆಯಿಂದ ಆಗುವ ದುಷ್ಪರಿಣಾ ಮವನ್ನು ತಿಳಿಸಿ ಪ್ರತಿಯೊಬ್ಬರು ಕಡ್ಡಾ ಯವಾಗಿ ಶೌಚಾಲಯ ನಿರ್ಮಿಸಿ ಕೊಳ್ಳುವಂತೆ ತಿಳಿಸಬೇಕು ಎಂದರು.
ಶಿಬಿರಾರ್ಥಿಗಳು ಸಲ್ಲಿಸಿದ ಸೇವೆ ಗ್ರಾಮಸ್ಥರು ಸ್ಮರಿಸುವಂತಿರಬೇಕು. ಗುರು ಹಿರಿಯರ ಮಾರ್ಗದರ್ಶನ ಪಡೆದು ಸೇವೆ ಸಲ್ಲಿಸಬೇಕು. ಇಂತಹ ಸಾಮಾಜಿಕ ಜವಾಬ್ದಾರಿಯಿಂದ ಶಿಬಿರಾರ್ಥಿಗಳಿಗೆ ನಾಯಕತ್ವ ಗುಣ ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಪಿ.ಪುಟ್ಟಬುದ್ಧಿ ಮಾತನಾಡಿ, ಹಳ್ಳಿಗಳ ಉದ್ದಾರವೇ ದೇಶದ ಉದ್ದಾರ ಎಂಬ ಗಾಂಧೀಜಿಯವರ ಕನಸನ್ನು ವಿದ್ಯಾರ್ಥಿಗಳು ನನಸು ಮಾಡಬೇಕು.
ಕೋಮು ಸೌಹಾರ್ದತೆ, ಬಾಲ್ಯ ವಿವಾಹ ಮತ್ತು ಜನಸಂಖ್ಯೆ ನಿಯಂತ್ರಿಸಲು ಅರಿವು ಮೂಡಿಸಬೇಕು. ಗ್ರಾಮಸ್ಥರು ಶಿಬಿರಾರ್ಥಿಗಳ ಸೇವೆಗೆ ಸಹಕಾರ ನೀಡಬೇಕು ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾಗ್ಯಮ್ಮ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಪ್ರಭಾರ ಉಪ ನಿರ್ದೇಶಕ ಸಿದ್ದುದೇವರು, ಪ್ರಾಂಶುಪಾಲ ಎ.ಎಂ.ನಾಗಮಲ್ಲಪ್ಪ, ಗ್ರಾಮದ ಮುಖಂಡರಾದ ಪುಟ್ಟಣ್ಣ, ಗುರುಮಲ್ಲಪ್ಪ, ಶಿಬಿರಾಧಿಕಾರಿ ನಾರಾಯಣಸ್ವಾಮಿ, ಉಪನ್ಯಾಸಕರಾದ ಪ್ರಭುಸ್ವಾಮಿ, ದೇವರಾಜು, ಪುಷ್ಬಲತಾ ಇತರರು ಹಾಜರಿದ್ದರು.