ಕೊಳ್ಳೇಗಾಲ: ರೇಷ್ಮೆ ನೂಲು ಬಿಚ್ಚಾಣಿಕೆದಾರರ ಬಡಾವಣೆಗೆ ಮೂಲ ಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ 13ನೇ ವಾರ್ಡ್ ದೇವಾಂಗ ಪೇಟೆ ನಿವಾಸಿಗಳು ಬುಧವಾರ ಪಟ್ಟಣ ಪಂಚಾಯಿತಿಗೆ ಮುತ್ತಿಗೆ ಹಾಕಿದರು.
ಬಡಾವಣೆ ನಿರ್ಮಾಣಗೊಂಡು 2 ದಶಕಗಳೇ ಕಳೆದರೂ ಈ ಬಡಾಣೆಗೆ ಮೂಲ ಸೌಲಭ್ಯ ಕಲ್ಪಿಸುವಲ್ಲಿ ಪಟ್ಟಣ ಪಂಚಾಯಿತಿ ವಿಫಲವಾಗಿದೆ ಎಂದು ಪ್ರತಿಭಟನಾಕಾರರು ದೂರಿದರು. ಬಡಾವಣೆಯಲ್ಲಿ 25 ಮನೆಗಳಿದ್ದು 150ಕ್ಕೂ ಹೆಚ್ಚು ಜನಸಂಖ್ಯೆ ಇದೆ.
ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದೆ. ಬಡಾವಣೆಯಲ್ಲಿ ಕೊರೆಸಲಾಗಿರುವ 2 ಕೊಳವೆಬಾವಿಗಳು ಅಂತರ್ಜಲ ಕುಸಿತದಿಂದ ಬರಿದಾಗಿವೆ. ಈ ಬಡಾವಣೆಗೆ ಕಾವೇರಿ ನೀರು ಪೂರೈಸಲು ಖಾಸಗಿ ಜಮೀನಿನವರು ಅವಕಾಶ ನೀಡದ ಕಾರಣ ಈ ಬಡಾವಣೆಯ ಜನತೆ ಸಂಕಷ್ಟದಲ್ಲಿ ಸಿಲುಕಿ ನೀರಿಗಾಗಿ ಪರದಾಡುವಂತಾಗಿದೆ. ಬಡಾವಣೆಯಲ್ಲಿ ಬೀದಿ ದೀಪ, ಚರಂಡಿ ಅವ್ಯವಸ್ಥೆಯನ್ನು ಸರಿಪಡಿಸಲು ಪಟ್ಟಣ ಪಂಚಾಯಿತಿ ಗಮನ ಹರಿಸದಿರುವುದನ್ನು ಖಂಡಿಸಿದರು.
ಬಡಾವಣೆ ಮುಖಂಡರಾದ ಗೋವಿಂದಪ್ಪ, ವೆಂಕಟೇಶ್, ಲಕ್ಷ್ಮೀನಾರಾಯಣ್, ಸುಂದ್ರ, ಶ್ರೀನಿವಾಸ, ರಂಗಮ್ಮ, ಮುತ್ತಮ್ಮ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.