ಗುಂಡ್ಲುಪೇಟೆ: ತಾಲ್ಲೂಕು ಕಚೇರಿಯ ಆವರಣದಲ್ಲಿ ಸಕಾಲ ಯೋಜನೆಯ ಸಮರ್ಪಕ ಅನುಷ್ಠಾನಕ್ಕಾಗಿ ಶೀಘ್ರದಲ್ಲೇ ಕೌಂಟರ್ ಆರಂಭಿಸುತ್ತಿರುವುದಾಗಿ ತಹಶೀಲ್ದಾರ್ ಚಿದಾನಂದಮೂರ್ತಿ ತಿಳಿಸಿದರು.
ತಾಲೂಕಿನ ಅರೇಪುರ ಗ್ರಾಮದಲ್ಲಿ ಶನಿವಾರ ನಡೆದ ಜನಸ್ಪಂದನ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಕಾಲ ಯೋಜನೆಯು ತಾಲ್ಲೂನಲ್ಲಿ ಯಶಸ್ವಿಯಾಗಿ ಜಾರಿಯಾಗಿದೆ. ಸರ್ಕಾರಿ ಕಚೇರಿಗಳಲ್ಲಿ ಕೆಲಸಗಳು ವಿಳಂಬವಾದರೆ ಖುದ್ದಾಗಿ ನನಗೆ ದೂರು ನೀಡಬಹುದು. ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವುದು ಖಚಿತ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಹಿಂದೆ ಸರ್ವೇ ಸ್ಕೆಚ್ ಪಡೆಯಲು ತಾಲ್ಲೂಕು ಕಚೇರಿಗೆ ರೈತರು ಎರಡು ಮೂರು ತಿಂಗಳು ಅಲೆಯಬೇಕಾಗಿತ್ತು. ನಾನು ಅಧಿಕಾರ ವಹಿಸಿಕೊಂಡ ನಂತರ ಕೇವಲ 15 ದಿನಗಳಲ್ಲಿ ಸರ್ವೇ ಸ್ಕೆಚ್ ದೊರೆಯುವ ವ್ಯವಸ್ಥೆ ಮಾಡಿದ್ದೇನೆ ಎಂದರು.
ಸೋಮಹಳ್ಳಿಯಲ್ಲಿ ಪಿಂಚಣಿ ಅದಾಲತ್ ಕಾರ್ಯಕ್ರಮವನ್ನು ಮುಂದಿನ ಶನಿವಾರದಂದು ಆರಂಭಿಸಲಾಗುವುದು. ಸರ್ಕಾರದ ಸೂಚನೆಯಂತೆ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಉದ್ದೇಶದಿಂದ ಈ ಅದಾಲತ್ ನಡೆಸಲಾಗುತ್ತಿದ್ದು, ಇಂತಹ ಸಭೆಗಳು ಹಾಗೂ ಅದಾಲತ್ಗಳಿಂದ ಜನಸಾಮಾನ್ಯರ ಹಲವು ಸಮಸ್ಯೆಗಳು ಬಗೆಹರಿದಿವೆ ಎಂದು ಅಭಿಪ್ರಾಯಪಟ್ಟರು.
ಪ್ರತಿ ಶುಕ್ರವಾರ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಸರ್ವೇ ಇಲಾಖೆ ಅಧಿಕಾರಿಗಳು, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಿಗರ ಸಭೆ ನಡೆಸಲಾಗುತ್ತಿದೆ. ಪರಿಹಾರ ವಿಳಂಬವಾಗಿರುವ ಬಗ್ಗೆ ಜನರು ಬಂದು ನನಗೆ ಮಾಹಿತಿ ನೀಡಿದರೆ ಅಧಿಕಾರಿಗಳ ಎದುರೇ ನಿಮ್ಮ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಒಣಗಿದ ತೆಂಗಿನ ಮರಗಳ ಸಮೀಕ್ಷೆ ಆರಂಭಿಸಲಾಗಿದ್ದು, ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಸಮೀಕ್ಷೆ ನಂತರ ಸರ್ಕಾರದ ನಿರ್ಧಾರದ ಮೇಲೆ ನಷ್ಟ ಅಥವಾ ಪರಿಹಾರ ನಿರ್ಧಾರವಾಗಲಿದೆ ಎಂದು ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ರಾಜಣ್ಣ ತಿಳಿಸಿದರು.
ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಪುಷ್ಪಾ ಎಂ. ಕಮ್ಮೋರ್, ಜಿಲ್ಲಾ ಪಂಚಾಯಿತಿ ಸದಸ್ಯ ಡಿ.ಸಿ. ನಾಗೇಂದ್ರ, ತಾಲ್ಲೂಕು ಪಂಚಾಯಿತಿ ಸದಸ್ಯ ಬಂಗಾರನಾಯಕ, ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ. ನಂದೀಶ್, ಉಪಾಧ್ಯಕ್ಷೆ ಗೀತಾ, ಸಿ.ಡಿ.ಪಿ.ಒ ಮದ್ದಾನಸ್ವಾಮಿ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಸೋಮಶೇಖರ್, ಪಶು ಸಂಗೋಪನ ಇಲಾಖೆ ಸಹಾಯಕ ನಿರ್ದೇಶಕ ನಟರಾಜು, ಬೇಗೂರು ಸೆಸ್ಕ್ ಸಹಾಯಕ ಎಂಜಿನಿಯರ್ ತಿಮ್ಮರಾಜು, ಬೇಗೂರು ಕಂದಾಯ ನಿರೀಕ್ಷಕ ರೇಚಣ್ಣ, ಗ್ರಾಮ ಲೆಕ್ಕಿಗರಾದ ಪ್ರಕಾಶ್,ಸಿ. ಮಹದೇವಪ್ಪ, ಗಂಗಾಧರ್, ಮುಖಂಡರಾದ ಮಹದೇವಕುಮಾರ್, ರಾಜು, ಸತೀಶ್,ಮಲ್ಲಪ್ಪ, ಬಸವಣ್ಣ, ಮಹೇಶ್ ಇತರರು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.