ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರುಕಟ್ಟೆಗೆ ಅವರೆಕಾಯಿ ಲಗ್ಗೆ

ಒಂದು ಕೆ.ಜಿಗೆ ₹ 40 ನಿಗದಿ: ನೆರೆಯ ಆಂಧ್ರದಿಂದಲೂ ಆವಕ ಹೆಚ್ಚಳ
Last Updated 19 ಜನವರಿ 2021, 2:25 IST
ಅಕ್ಷರ ಗಾತ್ರ

ಚಿಂತಾಮಣಿ: ತಾಲ್ಲೂಕಿನಲ್ಲಿ ಒಂದು ದಶಕದ ನಂತರ ಪ್ರಸಕ್ತ ವರ್ಷದಲ್ಲಿ ಉತ್ತಮ ಮಳೆ ಬೆಳೆಯಾಗಿದೆ. ರಾಗಿ, ಕಡಲೆಕಾಯಿ, ಅವರೆಕಾಯಿ ಸೇರಿದಂತೆ ಬಹುತೇಕ ಎಲ್ಲ ಬೆಳೆಗಳು ರೈತರನ್ನು ಖುಷಿಪಡಿಸಿವೆ. ಪ್ರಸಕ್ತ ವರ್ಷ ಅವರೆಕಾಯಿ ಘಮಲು ಹೆಚ್ಚಾಗಿಯೇ ಬಡಿಯುತ್ತಿದೆ. ಅವರೆಕಾಯಿಗೆ ಉತ್ತಮ ಬೆಲೆ ಸಿಗುತ್ತಿದ್ದು, ರೈತರ ಮುಖದಲ್ಲಿ ಮಂದಹಾಸ ಮಿನುಗುತ್ತಿದೆ.

ಅವರೆಕಾಯಿಗೆ ಎಲ್ಲಿಲ್ಲದ ಬೇಡಿಕೆ ಇರುತ್ತದೆ. ಜನತೆ ಅವರೆಕಾಯಿಗಾಗಿಯೇ ಬಾಯಿ ಚಪ್ಪರಿಸುತ್ತಾ ಕಾಯುತ್ತಿರುತ್ತಾರೆ. ಅವರೆಕಾಯಿ ಕಾಲದಲ್ಲಿ ಬೇರೆ ಯಾವುದೇ ತರಕಾರಿ ಇಷ್ಟವಾಗುವುದಿಲ್ಲ. ಅವರೆಕಾಳು ಹುಳಿ, ಕಾಳು ಗೊಜ್ಜು, ಈದುಕಿನ ಬೇಳೆ ಸಾರು ಎಂದರೆ ಬಾಯಲ್ಲಿ ನೀರೂರುತ್ತವೆ. ಅವರೆಕಾಯಿಗಾಗಿ ಬಾಯಿ ಚಪ್ಪರಿಸುವವರು ಈ ಬಾರಿ ಅಧಿಕ ಬೆಲೆ ತೆರಬೇಕಾಗಿದೆ.

ಈ ವರ್ಷ ಉತ್ತಮ ಮಳೆಯಾಗಿದ್ದು ಭೂಮಿಯಲ್ಲಿ ತೇವಾಂಶ ಇರುವ ಕಾರಣದಿಂದ ಅವರೆಕಾಯಿ ಇಳುವರಿ ಹೆಚ್ಚಾಗಿದೆ. ಮಳೆಯಂತೆ ಬೀಳುತ್ತಿರುವ ಇಬ್ಬನಿ ಅವರೆ ಗಿಡಗಳಿಗೆ ವರದಾನವಾಗಿದೆ. ಪೇಟೆಯಲ್ಲಿ ಕಳೆದ ವರ್ಷ ಆರಂಭದಲ್ಲಿ ಒಂದು ಕೆ.ಜಿಗೆ ₹ 40ರಿಂದ ₹ 50 ಆಸುಪಾಸಿನಲ್ಲಿದ್ದ ದರ ನಂತರ ₹ 20 ರಿಂದ ₹ 25ಕ್ಕೆ ಇಳಿಕೆಯಾಗಿತ್ತು. ಈ ವರ್ಷ ₹ 35ರಿಂದ ₹ 40ಕ್ಕೆ ಮಾರಾಟವಾಗುತ್ತಿದೆ.

ನಗರದ ಎಪಿಎಂಸಿ ಮಾರುಕಟ್ಟೆಗೆ ತಾಲ್ಲೂಕು ಹಾಗೂ ಸುತ್ತಮುತ್ತಲಿನ ಅವರೆಕಾಯಿ ಜತೆಗೆ ಆಂಧ್ರಪ್ರದೇಶದಿಂದ ಹೆಚ್ಚಿನ ಅವರೆಕಾಯಿ ಮಾರಾಟಕ್ಕೆ ಬರುತ್ತದೆ. ಬೆಳಗಿನಜಾವ ಮತ್ತು ಮಧ್ಯಾಹ್ನ ಎರಡು ಹರಾಜು ನಡೆಯುತ್ತದೆ. ಇಲ್ಲಿಂದ ಬೆಂಗಳೂರಿಗೆ ಹೆಚ್ಚಿಗೆ ರವಾನೆಯಾಗುತ್ತದೆ.

ಅವರೆಕಾಯಿ ಬೆಳೆಯನ್ನು ಪ್ರತ್ಯೇಕವಾಗಿ ಬೆಳೆಯದೆ ರಾಗಿ ಮತ್ತು ನೆಲಗಡಲೆಯೊಡನೆ ಅಕ್ಕಡಿ(ಉಪಬೆಳೆ) ಬೆಳೆಯಾಗಿ ಬೆಳೆಯುವುದು ರೂಢಿಯಲ್ಲಿದೆ. ರೈತರು ಮೊದಲು ಅವರೆ ಬೆಳೆಗೆ ಅಷ್ಟೊಂದು ಪ್ರಾಮುಖ್ಯತೆ ನೀಡುತ್ತಿರಲಿಲ್ಲವಾದರೂ ಇತ್ತೀಚೆಗೆ ವಾಣಿಜ್ಯ ಬೆಳೆಗೆ ನೀಡುವ ಪ್ರಾಮುಖ್ಯತೆ ಕೊಟ್ಟಿದ್ದಾರೆ.

ನೆಲಗಡಲೆ ಬೆಳೆಯಲ್ಲಿ 4-5 ಸಾಲುಗಳ ನಡುವೆ ಅವರೆ ಗಿಡಗಳನ್ನು ಹಾಕಲಾಗುತ್ತಿದ್ದು, ಇದರಿಂದ ನೆಲಗಡೆಲೆಗೆ ಕೀಟಗಳ ಹಾವಳಿಯನ್ನು ಸ್ವಲ್ಪಮಟ್ಟಿಗೆ ತಡೆಯಬಹುದು. ರಾಗಿ ಬೆಳೆಯಲ್ಲೂ ಇದೇ ರೀತಿ ಅವರೆ ಬೆಳೆಗಳನ್ನು ಸಾಲುಗಳಲ್ಲಿ ಬೆಳೆಸಲಾಗುತ್ತದೆ. ರಾಗಿ ಕೊಯ್ಲಿನ ನಂತರ ಅವರೆಗೆ ಅವಕಾಶವಾಗಿ ಹುಲುಸಾಗಿ ಬೆಳೆಯುತ್ತದೆ.

ತಾಲ್ಲೂಕಿನ ಕೈವಾರ, ಕಸಬಾ, ಅಂಬಾಜಿದುರ್ಗ, ಮುರುಗಮಲ್ಲ ಹೋಬಳಿಗಳಲ್ಲಿ ರಾಗಿಯ ಬೆಳೆಯ ನಡುವೆ ಹಾಗೂ ಮುಂಗಾನಹಳ್ಳಿ, ಕೆಂಚಾರ್ಲಹಳ್ಳಿ ಹೋಬಳಿಗಳಲ್ಲಿ ನೆಲಗಡಲೆ ನಡುವೆ ಅವರೆ ಬೆಳೆಯುತ್ತಾರೆ. ಇತ್ತೀಚೆಗೆ ಕೆಲವು ಕಡೆ ನೀರಾವರಿ ಬೆಳೆಯಾಗಿಯೂ ಅವರೆಯನ್ನು ಬೆಳೆಯುವ ಪದ್ಧತಿ ಆರಂಭವಾಗಿದೆ.

ಉತ್ತಮ ಬೆಳೆ, ಅಧಿಕ ಇಳುವರಿ, ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದ್ದು ಬೆಲೆ ಅಧಿಕವಾಗಿದ್ದರೂ ರೈತರಿಗೆ ಹೆಚ್ಚಿನ ಲಾಭ ಸಿಗದೆ ಮಧ್ಯವರ್ತಿಗಳ ಪಾಲಾಗುತ್ತಿದೆ. ಗ್ರಾಹಕರಿಗೂ ಬೆಲೆ ಎಟುಕದಂತಾಗಿದೆ.

ಹೊಲಗಳಲ್ಲಿ ಕಾಯಿ ಕೀಳುವ ಕೂಲಿ, ಮಾರುಕಟ್ಟೆಗೆ ಸಾಗಿಸುವ ವೆಚ್ಚ, ಮಾರುಕಟ್ಟೆ ಕಮಿಷನ್ ಮುಂತಾದ ಖರ್ಚುಗಳನ್ನೆಲ್ಲ ಕಳೆದರೆ ರೈತರಿಗೆ ಸಿಗುವುದು ಅತ್ಯಲ್ಪವೇ. ವ್ಯಾಪಾರಿಗಳು ಮಾತ್ರ ಒಂದೆರಡು ದಿನಗಳಲ್ಲಿ ರೈತರಿಗಿಂತ ಹೆಚ್ಚಿನ ಹಣ ಸಂಪಾದಿಸುತ್ತಾರೆ. ಗ್ರಾಹಕರು ಹೆಚ್ಚಿನ ಬೆಲೆ ಕೊಟ್ಟು ಕೊಂಡುಕೊಳ್ಳಬೇಕಾಗಿದೆ ಎಂದು ಗ್ರಾಹಕರು ದೂರುತ್ತಾರೆ.‌

ಅವರೆ ಕಾಯಿಯನ್ನು ಕೀಳದೆ ಗಿಡಗಳಲ್ಲೇ ಒಣಗಿಸಿ ಅವರೆಕಾಳನ್ನು ಮಾಡುತ್ತಾರೆ. ಒಣಗಿದ ಕಾಳನ್ನು ಬೇಳೆ ಮಾಡಿಸಿ ಮಾರಿದರೆ ಉತ್ತಮ ಲಾಭ ಸಿಗುತ್ತದೆ. ಬೇಳೆ ಮಾಡುವ ಆಧುನಿಕ ತಂತ್ರಜ್ಞಾನ ಲಭ್ಯವಿಲ್ಲದ ಕಾರಣ ಹಸಿ ಕಾಯಿಯನ್ನೇ ಮಾರಿಬಿಡುತ್ತಾರೆ. ಒಳ್ಳೆಯ ಲಾಭದ ಆಸೆಯಿಂದ ಒಣಗಿಸಿ ಬೇಳೆ ಮಾಡಲು ಹೊರಟರೆ ಪರಿಣಾಮಕಾರಿಯಾದ ತಂತ್ರಜ್ಞಾನವಿಲ್ಲದ ಕಾರಣ ಕಾಳಿಗೆ ಹುಳುಬಿದ್ದು ಹಾಳಾಗುತ್ತದೆ ಎಂದು ಅನುಭವಿ ರೈತ ರಾಮಪ್ಪಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT