ಚೇಳೂರು: ಪ್ರಯಾಣಿಕರಿಗಾಗಿ ಬಸ್ ನಿಲ್ದಾಣ ಇಲ್ಲ. ಹೀಗಾಗಿ ಪರಿಣಾಮ ಬಿಸಿಲು, ಮಳೆ, ಗಾಳಿಯಿಂದ ತಪ್ಪಿಸಿಕೊಳ್ಳಲು ಪ್ರಯಾಣಿಕರು ಮರ ಇಲ್ಲವೆ ಅಂಗಡಿಗಳನ್ನು ಆಶ್ರಯಿಸುವಂತಾಗಿದೆ.
ಚೇಳೂರು ತಾಲ್ಲೂಕಿನ ಗ್ರಾಮೀಣ ಭಾಗಗಳ ಪರಿಸ್ಥಿತಿ ಭಿನ್ನವಾಗಿಲ್ಲ. ಗ್ರಾಮ ಪಂಚಾಯಿತಿ ಕೇಂದ್ರ ನಲ್ಲಗುಟ್ಲಪಲ್ಲಿ ಗ್ರಾಮದಲ್ಲಿ ಬಸ್ ನಿಲ್ದಾಣವೇ ಇಲ್ಲ. ಪ್ರಯಾಣಿಕರು ರಸ್ತೆ ಬದಿಯೇ ನಿಂತುಕೊಳ್ಳಬೇಕಾಗಿದೆ.
ನಲ್ಲಗುಟ್ಲಪಲ್ಲಿ ಗ್ರಾಮದಲ್ಲಿ ಬಸ್ ಶಾಲೆ, ಕಾಲೇಜಿಗೆ ತೆರಳುವ ಸುತ್ತಲಿನ ಹಳ್ಳಿಗಳ ವಿದ್ಯಾರ್ಥಿಗಳಿಗೆ ಇದರಿಂದ ನಿತ್ಯ ತೊಂದರೆ ಆಗುತ್ತಿದೆ.
ನಲ್ಲಗುಟ್ಲಪಲ್ಲಿ ಗ್ರಾಮ ಚೇಳೂರು ಹಾಗೂ ಬಾಗೇಪಲ್ಲಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲಿದೆ. ಇಲ್ಲಿಂದ ದಿನನಿತ್ಯ ವಿವಿಧ ಪಟ್ಟಣಗಳಿಗೆ ತೆರಳಲು ಗುಂತೂರುಪಲ್ಲಿ, ಪೆದ್ದೂರು, ಬಿರಂಗವಾಡ್ಲಪಲ್ಲಿ, ಪಸುಫಲವಾರಪಲ್ಲಿ ಸೇರಿದಂತೆ ಇನ್ನೂ ಹಲವು ಗ್ರಾಮಗಳಿಂದ ಇಲ್ಲಿಗೆ ಬರುತ್ತಾರೆ.
ನಿತ್ಯವೂ ಮಳೆ ಹಾಗೂ ಸುಡು ಬಿಸಿಲಿನಲ್ಲೇ ನಿಂತು ಬಸ್ಗಾಗಿ ಕಾಯಬೇಕಾದ ಸ್ಥಿತಿ ಉಂಟಾಗಿದೆ. ಕೆಲವು ಸಂದರ್ಭದಲ್ಲಿ ಒಂದು ತಾಸು ಕಾದರು ಬಸ್ ಬರುವುದಿಲ್ಲ. ಅಂತಹ ಸಂದರ್ಭದಲ್ಲಿ ಕಷ್ಟವಾಗುತ್ತಿದೆ ಎಂದು ಪ್ರಯಾಣಿಕರಾದ ರವಣಪ್ಪ ನೋವು ತೋಡಿಕೊಂಡರು.
ಪ್ರತಿದಿನ ಮಹಿಳಾ ಪ್ರಯಾಣಿಕರು ಸಂಕಟ ಅನುಭವಿಸುತ್ತಾರೆ. ಬಸ್ ತಂಗುದಾಣ ಅಗತ್ಯವಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಕುಮಾರ್ ಹೇಳಿದರು.
ಗ್ರಾಮದಲ್ಲಿ ಬಸ್ ತಂಗುದಾಣ ಇದ್ದು ಅದನ್ನು ಕೆಡವಿ ಕಟ್ಟಡ ಕಟ್ಟಲಾಗಿದೆ. ಅಂದಿನಿಂದ ಇಂದಿನವರೆಗೂ ಬಸ್ ತಂಗುದಾಣ ಮರು ನಿರ್ಮಾಣ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಇಚ್ಛಾಶಕ್ತಿ ತೋರಿಲ್ಲ ಎಂದು ಶ್ರೀನಿವಾಸ ಬೇಸರ ವ್ಯಕ್ತಪಡಿಸಿದರು.