ಚಿಂತಾಮಣಿ: ನಗರದ ಗಜಾನನ ವೃತ್ತದಲ್ಲಿ ಭಾನುವಾರ ಕುಡಿದು ಕಾರು ಚಾಲನೆ ಮಾಡಿದ ಚಾಲಕ ಒಂದು ಆಟೊ, ದ್ವಿಚಕ್ರವಾಹನ ಹಾಗೂ ಪಾದಚಾರಿಗೆ ಡಿಕ್ಕಿ ಹೊಡೆದು, ಸರಣಿ ಅಪಘಾತ ನಡೆಸಿದ ನಂತರ ಆದರ್ಶ ಚಿತ್ರಮಂದಿರದ ಒಳಗಡೆ ನುಗ್ಗಿ ಗೋಡೆಗೆ ಡಿಕ್ಕಿ ಹೊಡೆದಿದೆ.
ಗಂಭೀರವಾಗಿ ಗಾಯಗೊಂಡಿದ್ದ ಪಾದಚಾರಿ ಬುಕ್ಕನಹಳ್ಳಿಯ ಲಕ್ಷ್ಮಮ್ಮ ಅವರಿಗೆ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರಕ್ಕೆ ಕಳುಹಿಸಲಾಗಿದೆ. ದ್ವಿಚಕ್ರವಾಹನ ಸವಾರ ರಾಮಾಂಜಿ ಎಂಬುವವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಗರದ ಪೆಟ್ರೋಲ್ ಬಂಕ್ ಒಂದರಲ್ಲಿ ಕೆಲಸ ಮಾಡುವ ಆಂಧ್ರಪ್ರದೇಶದ ರಾಮಸಮುದ್ರಂ ಮೂಲದ ಚರಣ್ ಕುಡಿದ ಮತ್ತಿನಲ್ಲಿ ಕಾರು ಚಾಲನೆ ಮಾಡಿ ಸರಣಿ ಅಪಘಾತ ಎಸಗಿರುವ ವ್ಯಕ್ತಿ. ಚರಣ್ ಕಂಠಪೂರ್ತಿ ಕುಡಿದು ನಗರದ ಗಜಾನನ ವೃತ್ತದಿಂದ ಶಿಡ್ಲಘಟ್ಟ ರಸ್ತೆಯಲ್ಲಿ ಬಾಗೇಪಲ್ಲಿ ಕಡೆಗೆ ಹೋಗುತ್ತಿದ್ದ. ಕಾರು ಡಿಕ್ಕಿ ಹೊಡೆದ ದ್ವಿಚಕ್ರವಾಹನ ಮತ್ತು ಆಟೊ ನಜ್ಜು-ಗುಜ್ಜಾಗಿವೆ.
ನಗರಠಾಣೆ ಪೊಲೀಸರು ಕಾರನ್ನು ವಶಪಡಿಸಿಕೊಂಡು ಚಾಲಕ ಚರಣ್ನನ್ನು ಬಂಧಿಸಿದ್ದಾರೆ.