ಗುಡಿಬಂಡೆ: ತಾಲೂಕಿನ ಸೋಮೇನಹಳ್ಳಿ ಚಂದ್ರಮೌಳೀಶ್ವರ ಸ್ವಾಮಿ ಪ್ರೌಢಶಾಲೆ, ಮದಭಿನವ ರಾಮಾನುಜ ಸರ್ಕಾರಿ ಪ್ರೌಢಶಾಲೆ ಮತ್ತು ಶಂಕರ ಭಾರತಿ ಸಂಸ್ಕೃತ ಪಾಠಶಾಲೆಗಳ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಭಾನುವಾರ ಹಳೆಯ ವಿದ್ಯಾರ್ಥಿಗಳಿಂದ ವಿಜೃಂಭಣೆಯಿಂದ ಆಚರಿಸಿದರು.
ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮಾತನಾಡಿ, ಶಾಲೆಯ ಅಭಿವೃದ್ದಿಗಾಗಿ ಸರ್ಕಾರದಿಂದ ಮತ್ತು ವೈಯುಕ್ತಿಕವಾಗಿ ಹೆಚ್ಚು ಒತ್ತು ನೀಡುವೆ. ಹಳೇ ವಿದ್ಯಾರ್ಥಿಗಳು ಶಾಲೆಗೆ ಬೇಕಾಗುವ ಅಭಿವೃದ್ದಿಗೆ ನೀಲನಕ್ಷೆ ನೀಡಿದರೆ ಅಭಿವೃದ್ದಿ ಮಾಡಲಾಗುವುದು ಹಾಗೂ ಹಲವಾರು ವರ್ಷಗಳಿಂದ ಪಿಯು ಕಾಲೇಜು, ಸರ್ಕಾರಿ ಅಸ್ವತ್ರೆ ನಿರ್ಮಿಸಲು ಸರ್ಕಾರದಿಂದ ಅನುಮತಿ ನೀಡಿದ್ದು ಶೀಘ್ರವಾಗಿ ಆರಂಭಿಸಲಾಗುವುದು ಎಂದು ತಿಳಿಸಿದರು.
ಶಾಲೆಯಲ್ಲಿ 1973 ರಿಂದ 2023ರ ವರ್ಷದವರೆವಿಗೂ ವ್ಯಾಸಂಗ ಮಾಡಿದ ಸುಮಾರು 6 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸೋಮೇನಹಳ್ಳಿಯ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ವೆಂಕಟಸುಬ್ಬರಾವ್ ಮಾತನಾಡಿ, 1973ರಲ್ಲಿ ಪೋಷಕರು ಮಕ್ಕಳನ್ನು ಶಾಲೆಗೆ ಸೇರಿಸಲು ಹಿಂಜರಿಯುತ್ತಿದ್ದು, ಶಿಕ್ಷಕರು ಗ್ರಾಮಗಳಿಗೆ ಭೇಟಿ ನೀಡಿ ಪೋಷಕರಿಗೆ ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಮನ ಒಲಿಸುತ್ತಿದ್ದೆವು. ಹಲವು ತಿಂಗಳು ವೇತನ ಇಲ್ಲದೇ ಕೆಲಸ ಮಾಡಿದ್ದೇವೆ. ಶಾಲೆಯಲ್ಲಿ ವಿದ್ಯಾಭ್ಯಾಸ ಪಡೆದ ಅನೇಕ ವಿದ್ಯಾರ್ಥಿಗಳು ಇಂದು ಉನ್ನತ ಸ್ಥಾನಗಳಲ್ಲಿರುವುದು ಸಂತಸದ ವಿಷಯವಾಗಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಮುನೇಗೌಡ ಮಾತನಾಡಿ, ಒಂದು ಗ್ರಾಮದಲ್ಲಿ ದೇವಾಲಯ ಕಟ್ಟುವುದಕ್ಕಿಂತ ಒಂದು ಶಾಲೆಯನ್ನು ನಿರ್ಮಿಸಿದರೆ ಆ ಗ್ರಾಮದ ಜನ ಶೈಕ್ಷಣಿಕ ಪ್ರಗತಿ ಸಾಧಿಸಿ ದೇಶದ ಆಸ್ತಿಯಾಗಿ ಬೆಳೆಯುತ್ತಾರೆ ಎಂದರು.
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಡೀನ್ ಗಿರೀಶ್ ಚಂದ್ರ, ಪ್ರೌಢಶಾಲಾ ನಿವೃತ್ತ ಶಿಕ್ಷಕರಾದ ನಾಗರತ್ನಮ್ಮ, ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಸ್.ನಾಗರಾಜರಾವ್, ಪರಮಕಾಲಮಹಾಸ್ವಾಮಿ ಸುಪುತ್ರ ಆರ್.ಎ.ಬಾಷ್ಯಂ, ಕನ್ನಡ ಚಲನಚಿತ್ರದ ನಿರ್ಮಾಪಕ ಡಿ.ಎನ್.ನಾಗಿರೆಡ್ಡಿ, ಸೋಮೇನಹಳ್ಳಿ ಗ್ರಾ.ಪಂ ಅಧ್ಯಕ್ಷೆ ಸುಮಂಗಳಾ, ಉಪಾಧ್ಯಕ್ಷ ಸೋಮಣ್ಣ ಸೇರಿ ಸಾವಿರಾರು ಹಳೇ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.