ಚಿಕ್ಕಬಳ್ಳಾಪುರ: ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿದರೆ ಅವರೇ (ಕಾಂಗ್ರೆಸ್) ಸಿಕ್ಕಿಹಾಕಿಕೊಳ್ಳುವರು ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರ ಸ್ವಾಮಿ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ಸಚಿವರು ತಮ್ಮ ಇಲಾಖೆಯ ನಿರ್ವಹಣೆಗಿಂತ ಪ್ರಜ್ವಲ್ ರೇವಣ್ಣ ಪ್ರಕರಣದ ವಕೀಲಿಕೆ ಮಾಡುತ್ತಿದ್ದಾರೆ.
ಸಿಬಿಐಗೆ ಪ್ರಕರಣವಹಿಸಿದರೆ
ಪೆನ್ ಡ್ರೈವ್ ಯಾರು ಕೊಟ್ಟಿದ್ದಾರೊ ಅವರೇ ಸಿಕ್ಕಿಹಾಕಿಕೊಳ್ಳುವರು ಎಂದು ಹೇಳಿದರು.
ಶುಂಠಿ ಬೆಳೆದವರು ಬೀದಿಗೆ ಬಂದಿದ್ದಾರೆ. ಹೆಣ್ಣು ಮಕ್ಕಳು ಕಣ್ಣೀರು ಹಾಕುತ್ತಿದ್ದಾರೆ. ಆದರೆ ಸರ್ಕಾರ ಮಾತ್ರ
ಎಲ್ಲವನ್ನೂ ಮರೆತು ಈ ಪ್ರಕರಣಕ್ಕೆ ಮಾತ್ರ ದೊಡ್ಡ ಪ್ರಚಾರ ಕೊಡುತ್ತಿದೆ. ಇದರಿಂದ ಏನು ಸಾಧನೆ ಮಾಡುತ್ತೀರಿ ಎಂದು ಪ್ರಶ್ನಿಸಿದರು.
ನಿಜವಾದ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವಿರಾ? ಆದರೆ ಆ ವಾತಾವರಣದಲ್ಲಿ ತನಿಖೆ ನಡೆಸುತ್ತಿದ್ದೀರಾ? ಈ ವಿಚಾರವಾಗಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳೇ ಆಲೋಚಿಸಬೇಕು ಎಂದರು.
ಇದು ಯಾರೂ ಬೆನ್ನುತಟ್ಟುವ ಪ್ರಕರಣವಲ್ಲ. ಈ ಘಟನೆಗಳು ಮುಂದೆ ಆಗದಂತೆ ದಂಡನೆಗಳು ಆಗಬೇಕು. ಆದರೆ ಆ ರೀತಿಯಲ್ಲಿ ಆಗುತ್ತಿದೆಯಾ ಎನ್ನುವುದೇ ನನ್ನ ಪ್ರಶ್ನೆ ಎಂದರು.