ಬಾಗೇಪಲ್ಲಿ: ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಬುಧವಾರ ನಡೆದ ಲೋಕಾಯುಕ್ತ ಸಾರ್ವಜನಿಕರ ಕುಂದುಕೊರತೆ ಅಹವಾಲು ಸ್ವೀಕಾರ ಸಭೆಗೆ ಸಲ್ಲಿಕೆಯಾಗಿದ್ದು ಕೇವಲ ಆರು ಅರ್ಜಿ ಮಾತ್ರ!.
ಲೋಕಾಯುಕ್ತರಿಂಂದ ಅಹವಾಲು ಸಭೆ ನಡೆಯುವ ಬಗ್ಗೆ ಪ್ರಚಾರ ನಡೆಸಿದ್ದರೂ, ಜನರಿಂದ ಅಹವಾಲು ಸಭೆಗೆ ನಿರಸ ಪ್ರತಿಕ್ರಿಯೆ ವ್ಯಕ್ತವಾಯಿತು.
ತಾಲ್ಲೂಕು ಕಚೇರಿಗೆ ಸಂಬಂಧಿಸಿದಂತೆ ಮೂರು ಅರ್ಜಿ, ಪಟ್ಟಣದಲ್ಲಿ ಕಲುಷಿತ ನೀರು ಸರಬರಾಜು, ಅರಣ್ಯ ಇಲಾಖೆ-1 ಸೇರಿದ ಅಹವಾಲು ಅರ್ಜಿ ಸಲ್ಲಿಕೆಯಾಯಿತು. ಅಹವಾಲನ್ನು ವಾರದ ಒಳಗೆ ಇತ್ಯರ್ಥಗೊಳಿಸಿ, ಲೋಕಾಯುಕ್ತ ಕಚೇರಿಗೆ ವರದಿ ನೀಡುವಂತೆ ಸಭೆಯಲ್ಲಿ ಅಧಿಕಾರಿಗಳಿಗೆ ಲೋಕಾಯುಕ್ತರು ಸೂಚನೆ ನೀಡಿದರು.
ಜಿಲ್ಲಾ ಲೋಕಾಯುಕ್ತ ವರಿಷ್ಠಾಧಿಕಾರಿ ರಾಮ್ ಎಲ್. ಅರಸಿದ್ಧಿ ಮಾತನಾಡಿ, ಎಲ್ಲಾ ಸರ್ಕಾರಿ ಕಚೇರಿಗಳ ಆವರಣದಲ್ಲಿ ಸರ್ಕಾರಿ ಅಧಿಕಾರಿಗಳು ಲೋಕಾಯುಕ್ತರ ಮೊಬೈಲ್ ನಂಬರ್ ಇರುವ ಕರಪತ್ರ ಅಂಟಿಸಬೇಕು ಎಂದು ತಿಳಿಸಿದರು.
ಕರ್ತವ್ಯ ಲೋಪ ಹಾಗೂ ದುರ್ನಡತೆ, ಲಂಚ ಪಡೆಯುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಸರ್ಕಾರಿ ಕಚೇರಿಗಳಲ್ಲಿ ಗೌರವಯುತವಾಗಿ ಜನರ ಸಮಸ್ಯೆ ಆಲಿಸಿ ಸಮಸ್ಯೆಗಳಿಗೆ ಸ್ಪಂದಿಸಬೇಕು. ಕಚೇರಿಗೆ ಸಂಬಂಧಪಡದ ಅರ್ಜಿಯನ್ನು ಸಂಬಂಧಪಟ್ಟ ಇಲಾಖೆಗೆ ವರ್ಗಾಯಿಸಿ ಅರ್ಜಿದಾರರಿಗೆ ಸೂಕ್ತ ಸಲಹೆ ನೀಡಬೇಕು ಎಂದು ಸೂಚಿಸಿದರು.
ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿ ಸ್ವಜನಪಕ್ಷಪಾತ, ದುರ್ನಡತೆ, ಸೇವೆ ವಿಳಂಬ, ವಿನಾಃಕಾರಣ ಅರ್ಜಿದಾರರನ್ನು ಕಚೇರಿಗೆ ಸುತ್ತಾಡಿಸುವುದು, ಅಶಿಸ್ತು ತೋರಿದರೆ, ಕರ್ತವ್ಯ ಲೋಪ ಕಂಡುಬಂದರೆ ಲೋಕಾಯುಕ್ತ ಕಾಯ್ದೆ ಅಡಿಯಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿ ವರ್ಗಕ್ಕೆ ಎಚ್ಚರಿಕೆ ನೀಡಿದರು.