ಚಿಂತಾಮಣಿ: ನಗರದಲ್ಲಿ ಭಾನುವಾರ ಸಂತೆಯಲ್ಲಿ ಮಹಿಳೆ ತರಕಾರಿ ಖರೀದಿಸುತ್ತಿರುವಾಗ ಕುತ್ತಿಗೆಯಿಂದ ಮಾಂಗಲ್ಯ ಸರ ಕಿತ್ತು ಕಳ್ಳ ಪರಾರಾಯಾಗಿದ್ದಾನೆ.
ನಗರದ ಬುಕ್ಕನಹಳ್ಳಿ ರಸ್ತೆಯ ಚೌಡೇಶ್ವರಿ ಓಣಿಯ ಮಂಜುಳಾ ಸರ ಕಳೆದುಕೊಂಡ ಮಹಿಳೆ. ಈ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಂಜುಳಾ ಪ್ರತಿ ಭಾನುವಾರ ಸಂಜೆ ಸಂತೆಗೆ ಹೋಗಿ ತರಕಾರಿ ಖರೀದಿಸಿ ತರುತ್ತಿದ್ದರು. ಅದರಂತೆ ಭಾನುವಾರ ಸಂಜೆ 6.45ಕ್ಕೆ ಮನೆಯಿಂದ ಹೊರಟು ಸರ್ಕಾರಿ ರೇಷ್ಮೆಗೂಡು ಮಾರುಕಟ್ಟೆ ಬಳಿ ತರಕಾರಿ ಖರೀದಿಸುತ್ತಿದ್ದರು. ಆ ವೇಳೆ ಈ ಘಟನೆ ನಡೆದಿದೆ.
ಮಹಿಳೆ ಕೂಗಿಕೊಂಡಿದ್ದಾರೆ. ಅಕ್ಕಪಕ್ಕದ ಕೆಲವರು ಆರೋಪಿಯನ್ನು ಹಿಂಬಾಲಿಸಿದರೂ ಪರಾರಿಯಾಗಿದ್ದಾನೆ. ಮಾಂಗಲ್ಯ ಸರ 48 ಗ್ರಾಂ ಹಾಗೂ ಅದರಲ್ಲಿ 5 ಗ್ರಾಂನ ಎರಡು ಮಾಂಗಲ್ಯದ ಬೊಟ್ಟುಗಳು ಇದ್ದವು. ಆರೋಪಿಯನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.
ನಗರಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.