ಬಾಗೇಪಲ್ಲಿಯಲ್ಲಿ ನ್ಯಾಷನಲ್ ಕಾಲೇಜು ಸ್ಥಾಪಿಸಿ, ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ದೊರೆಯುವಂತೆ ಮಾಡಿದರು. 40 ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದರೊಂದಿಗೆ ಆರಂಭಗೊಂಡ ನ್ಯಾಷನಲ್ ಪದವಿ ಕಾಲೇಜಿನಿಂದ ಈಗ ಹಲವು ಮಂದಿ ಶಿಕ್ಷಣ ಪಡೆದು ಬದುಕು ರೂಪಿಸಿಕೊಂಡಿದ್ದಾರೆ.
`ನ್ಯಾಷನಲ್ ಪದವಿ ಕಾಲೇಜು ಸ್ಥಾಪನೆಗೊಳ್ಳುವ ಮುನ್ನ ಪದವಿಪೂರ್ವ ಶಿಕ್ಷಣ ಪೂರೈಸಿದ ಬಹುತೇಕ ವಿದ್ಯಾರ್ಥಿಗಳು ಪದವಿ ಶಿಕ್ಷಣಕ್ಕೆ ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ಚಿಂತಾಮಣಿ ಕಾಲೇಜುಗಳಿಗೆ ಹೋಗಬೇಕಿತ್ತು. ನ್ಯಾಷನಲ್ ಕಾಲೇಜು ಸ್ಥಾಪನೆಗೊಂಡ ನಂತರ ಬಹುತೇಕ ವಿದ್ಯಾರ್ಥಿಗಳಿಗೆ ಬಾಗೇಪಲ್ಲಿಯಲ್ಲೇ ಪದವಿ ಶಿಕ್ಷಣ ಪಡೆಯಲು ಸಾಧ್ಯವಾಯಿತು~ ಎಂದು ಕನ್ನಡಪರ ಸಂಘಟನೆ ಮುಖಂಡ ಬಾಬಾಜಾನ್ `ಪ್ರಜಾವಾಣಿ~ಗೆ ತಿಳಿಸಿದರು.
`ಪಟ್ಟಣದ ಗುಳೂರು ರಸ್ತೆ ವೃತ್ತವನ್ನು ಡಾ.ಎಚ್.ಎನ್.ವೃತ್ತವೆಂದು ನಾಮಕರಣ ಮಾಡಲಾಗಿದೆ. ಆದರೆ, ಆ ವೃತ್ತದಲ್ಲಿ ಡಾ.ಎಚ್.ಎನ್.ಅವರ ಪ್ರತಿಮೆ ಅಥವಾ ಪುತ್ಥಳಿ ಇಲ್ಲ. ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಅಥವಾ ವೃತ್ತಗಳಲ್ಲಿ ಪುತ್ಥಳಿ ಸ್ಥಾಪನೆಗಾಗಿ ಒಂದಷ್ಟು ಸಂಘ ಸಂಸ್ಥೆಗಳು ಕೆಲ ತಿಂಗಳ ಹಿಂದೆ ನಿಧಿ ಸಂಗ್ರಹಿಸಿದ್ದವು.
ಆದರೆ, ನಿಧಿ ಸಂಗ್ರಹಣೆಯ ನಂತರ ಪುತ್ಥಳಿ ವಿಷಯ ಮತ್ತೆ ಪ್ರಸ್ತಾಪವಾಗಲಿಲ್ಲ. ಜಿಲ್ಲಾಡಳಿತ ಅಥವಾ ತಾಲ್ಲೂಕು ಆಡಳಿತ ಪುತ್ಥಳಿ ಸ್ಥಾಪನೆ ಬಗ್ಗೆ ಗಮನಹರಿಸುವುದು ಉತ್ತಮ~ ಎಂದು ಅವರು ಹೇಳಿದರು.