ಗುಡಿಬಂಡೆ: ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಶೌಚಾಲಯದ ಗುಂಡಿಯಿಂದ ಹೊರಬರುತ್ತಿರುವ ಕಲುಷಿತ ನೀರಿನಿಂದ ಸುತ್ತಮುತ್ತಲ ಜನತೆ ದುರ್ವಾಸನೆಯ ಜೊತೆಗೆ ಸಾಂಕ್ರಾಮಿಕ ರೋಗಗಳ ಭೀತಿ ಎದುರಿಸುವಂತಾಗಿದೆ ಎಂದು ಪ.ಪಂ. ಸದಸ್ಯ ರಾಜಣ್ಣ ದೂರಿದ್ದಾರೆ.
ಮೆಟ್ರಿಕ್ ಪೂರ್ವ ಬಾಲಕೀಯರ ಹಾಸ್ಟೆಲ್ ಕಟ್ಟಡದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ನಡೆಯುತ್ತಿದೆ. ಇಲ್ಲಿರುವ 150ಕ್ಕೂ ಹೆಚ್ಚು ಮಕ್ಕಳು ಹಾಸ್ಟೆಲ್ನಲ್ಲಿರುವ ಸ್ನಾನದ ಕೋಣೆಗಳು ಹಾಗೂ ಶೌಚಾಲಯಗಳನ್ನು ಬಳಸುತ್ತಿದ್ದಾರೆ. ಇವುಗಳಿಂದ ಬರುವ ಕಲುಷಿತ ನೀರು ಹಾಗೂ ದುರ್ವಾಸನೆ ಅಕ್ಕಪಕ್ಕದ ನಿವಾಸಿಗಳಲ್ಲಿ ಸಾಂಕ್ರಾಮಿಕ ರೋಗದ ಭೀತಿ ಉಂಟು ಮಾಡಿದೆ.
ಶೌಚಾಲಯ ಹಾಗೂ ಸ್ನಾನದ ಕೋಣೆಗಳಿಂದ ಬರುವ ಕಲುಷಿತ ನೀರು ವಸತಿ ನಿಲಯದಲ್ಲಿ ಪಕ್ಕದಲ್ಲಿ ನಿರ್ಮಿಸಿರುವ ಗುಂಡಿಯೊಂದಕ್ಕೆ ಸೇರುತ್ತದೆ. ಈ ಗುಂಡಿಯನ್ನು ಬಂಡೆಯೊಂದರ ಮೇಲೆ ನಿರ್ಮಿಸಲಾಗಿದೆ. ಭೂಮಿಯೊಳಗೆ ನೀರು ಇಂಗಲು ಆಸ್ಪದವಿಲ್ಲದಂತಾಗಿ ಸಮಸ್ಯೆ ಉದ್ಭವಿಸಿದೆ.
ವಸತಿ ಶಾಲೆಯ ಮುಂಭಾಗದಲ್ಲಿ ಸಾಕಷ್ಟು ಸ್ಥಳವಿದೆ. ಅಲ್ಲಿ ಇಂಗು ಗುಂಡಿ ನಿರ್ಮಿಸಿದ್ದರೆ ಈ ಸಮಸ್ಯೆ ಉದ್ಭವಿಸುತ್ತಿರಲಿಲ್ಲ. ಈ ಬಗ್ಗೆ ವಸತಿ ನಿಲಯದ ಮೇಲ್ವಿಚಾರಕರಿಗೆ ಮತ್ತು ಪಟ್ಟಣ ಪಂಚಾಯತಿ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮೌಖಿಕವಾಗಿ ದೂರು ನೀಡಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.