ಚೇಳೂರು: ಪಾತಪಾಳ್ಯ ಹೋಬಳಿಯ ಸೋಮನಾಥಪುರ ಗ್ರಾಮದ ಮುಖ್ಯ ರಸ್ತೆಯ ಚರಂಡಿದ್ದು ಕೊಳಚೆ ನೀರು ರಸ್ತೆಗೆ ಹರಿಯುತ್ತಿದೆ. ಪಾದಚಾರಿಗಳಿಗೆ, ವಾಹನ ಸವಾರರಿಗೆ ತೊಂದರೆಯಾಗಿದೆ. ಇಲ್ಲಿಯೇ ಹಾಲಿನ ಡೇರಿ ಇದ್ದು ಬೆಳಿಗ್ಗೆ, ಸಂಜೆ ಡೇರಿಗೆ ಬರುವವರು ತ್ಯಾಜ್ಯದ ನೀರಿನ ಮೇಲೆಯೇ ನಡೆಯಬೇಕಾಗಿದೆ.
ಗ್ರಾಮದ ಚರಂಡಿಗಳಲ್ಲಿ ಹೂಳು ತುಂಬಿದೆ. ಕೊಳಚೆ ನೀರು ಸರಾಗವಾಗಿ ಹರಿಯದೆ ರಸ್ತೆಗೆ ಬರುತ್ತಿದೆ. ಸೊಳ್ಳೆಗಳ ಕಾಟ ಮೀತಿ ಮೀರಿದೆ. ಮೂಗು ಮುಚ್ಚಿ ಓಡಾಡುವ ಸ್ಥಿತಿ ಇದೆ. ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಲ್ಲಿ ಗ್ರಾಮಸ್ಥರು ಇದ್ದಾರೆ. ಇಷ್ಟಾದರೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಜಾಣ ಕುರುಡರಾಗಿದ್ದಾರೆ ಎಂದು ಗ್ರಾಮದ ವಿಶ್ವನಾಥ್ ಆರೋಪಿಸಿದರು.
ಬಸ್ ನಿಲ್ದಾಣದಲ್ಲಿ ರಾಶಿ ಗಟ್ಟಲೇ ತ್ಯಾಜ್ಯ ಸುರಿಯುತ್ತಿದ್ದು ನಿಲ್ದಾಣ ದುರ್ನಾತ ಬೀರುತ್ತಿದೆ. ಮೂಲ ಸೌಲಭ್ಯಗಳ ಕೊರತೆ ಹೆಚ್ಚಿದೆ ಎಂದು ದೂರಿದರು. ರಸ್ತೆ ಬದಿಯಲ್ಲೇ ವರ್ತಕರು ತ್ಯಾಜ್ಯ ಸುರಿಯುತ್ತಿದ್ದಾರೆ. ಕೂಡಲೇ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಮಂಜುನಾಥ್ ತಿಳಿಸಿದರು.