ಚಿಂತಾಮಣಿ: ಯುವಜನರು ದೇಶಪ್ರೇಮ, ದೇಶಭಕ್ತಿ ಬೆಳೆಸಿಕೊಂಡು ಸಂದೀಪ್ ಉನ್ನಿಕೃಷ್ಣನ್ ಅವರಂತೆ ಧೈರ್ಯ, ಸಾಹಸ ಮೈಗೂಡಿಸಿಕೊಂಡು ದೇಶಕ್ಕಾಗಿ ಶ್ರಮಿಸಬೇಕು ಎಂದು ನಗರಸಭೆ ಆಯುಕ್ತ ಎಸ್.ಪ್ರಸಾದ್ ಸಲಹೆ ನೀಡಿದರು.
ನಗರದ ಸರ್ಕಾರಿ ಪಾಲಿಟೆಕ್ನಿಕ್ನಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಶುಕ್ರವಾರ ಹಮ್ಮಿಕೊಂಡಿದ್ದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶಸೇವೆಗಾಗಿ ಪ್ರತಿಯೊಬ್ಬರೂ ಟೊಂಕಕಟ್ಟಿ ನಿಲ್ಲಬೇಕು. ಉನ್ನಿಕೃಷ್ಣನ್ ನಿವೃತ್ತ ಐಎಸ್ಒ ಅಧಿಕಾರಿಯ ಮಗ. ಬಾಲ್ಯದಿಂದಲೂ ಸೈನ್ಯಕ್ಕೆ ಸೇರಬೇಕು ಎಂಬ ಆಸೆಗೆ ತಂದೆ ಬೆನ್ನೆಲುಬಾಗಿ ನಿಂತು 1995ರಲ್ಲಿ ಉನ್ನಿಕೃಷ್ಣನ್ ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಸೇರಿಕೊಂಡರು. ಪೋಷಕರು ಸಹ ಮಕ್ಕಳ ಆಸೆಗೆ ತಣ್ಣಿರು ಎರಚದೆ ಸೈನ್ಯಕ್ಕೆ ಸೇರಲು ಪ್ರೋತ್ಸಾಹ ನೀಡಬೇಕು ಎಂದರು.
ಪ್ರಭಾರ ದಂಡಾಧಿಕಾರಿ ಅಣ್ಣಪ್ಪ ಮಾತನಾಡಿ, ಉನ್ನಿಕೃಷ್ಣನ್ ಸೇನೆಗೆ ಸೇರಿ ನಿಸ್ವಾರ್ಥದಿಂದ ಹಾಗೂ ಧೈರ್ಯ ಸಾಹಸದಿಂದ ದುಡಿಯುತ್ತಿರುವ ಸಂದರ್ಭದಲ್ಲಿ ವೀರಮರಣ ಹೊಂದಿದರು. ಅವರ ದೇಶಭಕ್ತಿ ಇಂದಿನ ವಿದ್ಯಾರ್ಥಿ, ಯುವಜನರಿಗೆ ದಾರಿದೀಪವಾಗಿದೆ ಎಂದರು.
ಎಬಿವಿಪಿ ಜಿಲ್ಲಾ ಸಂಚಾಲಕ ಸುರೇಶ್ ಮಾತನಾಡಿ, 1999ರಲ್ಲಿ ಕಾರ್ಗಿಲ್ ಯುದ್ದದಲ್ಲಿ ಮುಂಚೂಣಿಯಲ್ಲಿ ನಿಂತು ಹೋರಾಟ ಮಾಡಿದ್ದರು. 2008ರಲ್ಲಿ ಮುಂಬೈನ ತಾಜ್ ಮಹಲ್ ಹೋಟೆಲ್ ಮೇಲೆ ಪಾಕಿಸ್ತಾನದ ಉಗ್ರಗಾಮಿಗಳು ದಾಳಿ ಮಾಡಿದಾಗ ಪ್ರಾಣವನ್ನೇ ಪಣವಾಗಿಟ್ಟು ಹೋರಾಡುವ ಮೂಲಕ ದೇಶೀಯ ಹಾಗೂ ವಿದೇಶಿಯರು ಸೇರಿದಂತೆ ನೂರಾರು ಜನರ ಪ್ರಾಣ ಉಳಿಸಿದ್ದರು. ಉಗ್ರರನ್ನು ಸೆದೆಬಡಿದು ವೀರಮರಣ ಅಪ್ಪಿದ್ದರು ಎಂದರು.
ಗಿಡ ನೆಡುವ ಮೂಲಕ ಅವರ ಜನ್ಮ ದಿನದ ಕಾರ್ಯಕ್ರಮ ಉದ್ಘಾಟಿಸಲಾಯಿತು. ನಗರಸಭೆಯ ಉಪಾಧ್ಯಕ್ಷೆ ಸುಜಾತಶಿವಪ್ಪ, ಪ್ರಾಂಶುಪಾಲ ಜಯತೀರ್ಥ, ಉಪನ್ಯಾಸಕರಾದ ಶ್ರೀನಿವಾಸ್, ನರೇಂದ್ರ, ಪಾಪಿರೆಡ್ಡಿ, ಶಿವಕುಮಾರ್ ವಿದ್ಯಾರ್ಥಿ ಮುಖಂಡರಾದ ಸಂದೀಫ್, ಅಂಬರೀಶ್, ಗೋವರ್ಧನ್, ಭರತ್, ಮನೋಜ್, ಕಾವ್ಯ, ಚಂದನ ಇದ್ದರು.