ಬಾಗೇಪಲ್ಲಿ: ಪ್ರಾಚೀನ ಕಾಲದ ಶಿಲಾಯುಗಗಳು , ಶಿಲ್ಪಕಲೆ, ಕಲ್ಯಾಣಿಗಳನ್ನು ಪ್ರತಿಯೊಬ್ಬರು ಉಳಿಸಿ, ರಕ್ಷಿಸಿ ಸಂಸ್ಕೃತಿ ಉಳಿಸುವ ಅಗತ್ಯ ಇದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶಪಾಲರಾದ ಪ್ರೊ.ಕೆ.ಎಸ್.ಭಾರತಿ ತಿಳಿಸಿದರು.ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ “ಪರಂಪರಾ ಕೂಟ” ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಾಚೀನ ಕಲೆ, ಸಾಹಿತ್ಯ, ದೇವಾಲಯ, ಪ್ರಾಚ್ಯ ವಸ್ತು ಸಂಗ್ರಾಲಯಗಳು ಕೆಲವರ ಸ್ವಾರ್ಥಕ್ಕಾಗಿ ವಿನಾಶದಂಚಿನಲ್ಲಿವೆ. ಹಿಂದಿನ ಕಾಲದ ಭವ್ಯ ಪರಂಪರೆಯನ್ನು ಸಾರುವ ತಾಲ್ಲೂಕಿನ ಐತಿಹಾಸಿಕ ಗುಮ್ಮನಾಯಕಪಾಳ್ಯ, ಬೇಲೂರು, ಹಳೆಬೀಡು, ಸೋಮನಾಥಪುರ ಇದಕ್ಕೆ ಉತ್ತಮ ಉದಾಹರಣೆಯಾಗಿವೆ ಎಂದರು.
ದೇಶದ ಸಂಸ್ಕೃತಿ, ಪರಂಪರೆ ಸಾರುವ ಜಾನಪದ, ಗೀಗೀ ಪದ, ಸೋಬಾನೆ ಪದಗಳು ಸಹ ಮಾಯವಾಗುತ್ತಿವೆ. ಇಂತಹ ಸಂಸ್ಕೃತಿ ಹಾಗೂ ಪರಂಪರೆ ಸಾರುವ ಸ್ಥಳಗಳ ಮಹತ್ವ ತಿಳಿಯಲು ಪ್ರತಿಯೊಬ್ಬರು ಶ್ರಮಿಸಬೇಕು ಎಂದರು.
ತಾಲ್ಲೂಕಿನ ಗುಮ್ಮನಾಯಕಪಾಳ್ಯದ ಮಹತ್ವ ಹಾಗೂ ಪರಂಪರೆ ಕುರಿತು ಕಾಲೇಜಿನ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಳ್ಳಲು ಒಂದು ದಿನದ ಪ್ರವಾಸ ಸಹ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸಬ್ ಇನ್ಸ್ಪೆಕ್ಟರ್ ಜೆ.ಎನ್.ಆನಂದ್ಕುಮಾರ್ ಮಾತನಾಡಿ, ಬಾಗೇಪಲ್ಲಿ ತಾಲ್ಲೂಕಿನ ಕೆಲ ಗ್ರಾಮೀಣ ಪ್ರದೇಶಗಳಲ್ಲಿ ಐತಿಹಾಸಿಕ ಸ್ಮಾರಕಗಳು ನಿರ್ವಹಣೆಯಿಲ್ಲದೆ ಸೊರಗುತ್ತಿರುವುದು ವಿಷಾದನೀಯ ಎಂದರು.
ಪುರಸಭಾ ಸದಸ್ಯ ಚಂದ್ರಶೇಖರ್ ಮಾತನಾಡಿದರು. ಪುರಸಭಾ ಮುಖ್ಯಾಧಿಕಾರಿ ಸುಧಾಕರ್, ಉಪನ್ಯಾಸಕರಾದ ಕೆ.ಎಂ.ನಯಾಜ್ ಅಹಮದ್, ನಂಜಪ್ಪ, ಡಾ.ಪ್ರಭಾಕರ್, ಮಂಜುಳ, ರಾಜಶೇಖರರೆಡ್ಡಿ, ಶಿವಪ್ರಸಾದ್, ಹೃಷಿಕೇಷ್ ಉಪಸ್ಥಿತರಿದ್ದರು.