ಚಿಕ್ಕಮಗಳೂರು: ‘ಚೈತ್ರಶ್ರೀ ನಿಸರ್ಗ ಸಾವಯವ ಆಹಾರ ಮಳಿಗೆ ಹಾಗೂ ಸುಸ್ಥಿರ ಅಭಿವೃದ್ಧಿ ಸಂಸ್ಥೆ ವತಿಯಿಂದ ಇದೇ 7ರಂದು ನಗರದ ಬ್ರಹ್ಮಸಮುದ್ರ ರಂಗಣ್ಣ ಕಲ್ಯಾಣಮಂಟಪದಲ್ಲಿ ವಿಚಾರ ಸಂಕಿರಣ ಮತ್ತು ಸಾವಯವ ಆಹಾರ ಮೇಳ ಆಯೋಜಿಸಲಾಗಿದೆ’ ಎಂದು ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ಬಿ.ಆರ್.ವಿನಯ್ ಇಲ್ಲಿ ಸೋಮವಾರ ತಿಳಿಸಿದರು.
‘ಕಡೂರು ತಾಲ್ಲೂಕು ಆರೋಗ್ಯಾಧಿಕಾರಿ ಎಸ್.ಕೆ.ಪ್ರಭು ಅವರು ಅಂದು ಬೆಳಿಗ್ಗೆ 10 ಗಂಟೆಗೆ ಉದ್ಘಾಟನೆ ನೆರವೇರಿಸುವರು. ‘ಉತ್ತಮ ಆರೋಗ್ಯಕ್ಕಾಗಿ ಸರಳ ಸೂತ್ರಗಳು’ ವಿಚಾರ ಸಂಕಿರಣ ಏರ್ಪಡಿಸಿದ್ದು, ಡಾ.ಕೆ.ಆರ್.ವಸಂತ್ಕುಮಾರ್ ಉಪನ್ಯಾಸ ನೀಡುವರು’ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘‘ನಶಿಸುತ್ತಿರುವ ಭಾರತೀಯ ಸಾವಯವ ದೇಸಿ ಭತ್ತದ ತಳಿಗಳು ಮತ್ತು ಅಕ್ಕಿ ಮಹತ್ವ– ಪರಿಚಯ’ ವಿಚಾರ ಸಂಕಿರಣ ಮಧ್ಯಾಹ್ನ 2 ಗಂಟೆಗೆ ಏರ್ಪಡಿಸಲಾಗಿದೆ. ದಾವಣಗೆರೆಯ ಶರಣ ಮುದ್ದಣ್ಣ ಸಾವಯವ ಕೃಷಿಕರ ಬಳಗದ ಅಧ್ಯಕ್ಷ ಎ.ಎನ್.ಆಂಜನೇಯ ಅವರು ಮಾಹಿತಿ ನೀಡುವರು.
ಮಧ್ಯಾಹ್ನ 3 ಗಂಟೆಗೆ ಕೈತೋಟ ತರಬೇತಿ ಆಯೋಜಿಸಲಾಗಿದೆ. ಬೆಳಗಾವಿಯ ಜವಾರಿ ತಳಿ ಬೀಜ ಬ್ಯಾಂಕ್ ಸ್ಥಾಪಕ ಶಂಕರ್ ಲಂಗಟಿ ಪಾಲ್ಗೊಳ್ಳುವರು. ಬೆಳಿಗ್ಗೆ 10.30ರಿಂದ ಸಂಜೆ 5 ಗಂಟೆವರೆಗೆ ಸಾವಯವ ಆಹಾರ ಮೇಳ ನಡೆಯಲಿದೆ’ ಎಂದು ತಿಳಿಸಿದರು.