ಚಿಕ್ಕಮಗಳೂರು: ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ವತಿಯಿಂದ ನಗರದಲ್ಲಿ ಶನಿವಾರ ಜಾಗೃತಿ ಜಾಥಾ ಮತ್ತು ಬೀದಿ ನಾಟಕ ಪ್ರದರ್ಶಿಸಲಾಯಿತು.
ಹನುಮಂತಪ್ಪ ವೃತ್ತದಿಂದ ಎಂ.ಜಿ.ರಸ್ತೆ ಮೂಲಕ ಆಜಾದ್ ಪಾರ್ಕ್ ವೃತ್ತದವರೆಗೆ ಸಂಸ್ಥೆಯ ಸದಸ್ಯರು ಜಾಥಾ ನಡೆಸಿದರು. ವಾಕ್, ಶ್ರವಣ ದೋಷ ತಡೆಗಟ್ಟುವ ಬಗ್ಗೆ ಘೋಷಣೆ ಕೂಗಿದರು.
ಕೆಸ್ಆರ್ಟಿಸಿ ಬಸ್ ನಿಲ್ದಾಣ ಮತ್ತು ಆಜಾದ್ ಪಾರ್ಕ್ ವೃತ್ತದಲ್ಲಿ ವಾಕ್, ಶ್ರವಣ ದೋಷ ತಡೆಗಟ್ಟುವ ಬೀದಿ ನಾಟಕ ಪ್ರದರ್ಶಿಸಿದರು. ಸಂಸ್ಥೆಯ ಮುಖ್ಯಸ್ತೆ ಸ್ವಪ್ನಾ ಮಾತನಾಡಿ, ಜನರಿಗೆ ಜೀವನ ನಡೆಸಲು ಸಂವಹನ ಅಗತ್ಯ. ಅದರ ಬಗ್ಗೆ ಜನರಿಗೆ ಮಾಹಿತಿ ನೀಡುವ ನಿಮಿತ್ತ ಸಂಸ್ಥೆ ವತಿಯಿಂದ ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತಿದೆ.
ಸೀಳು ತುಟಿ ಮತ್ತು ಅಂಗುಳು, ಧ್ವನಿಯ ತೊಂದರೆ, ನರಗಳ ದೌರ್ಬಲ್ಯ, ಉಚ್ಛಾರಣೆ ದೋಷವನ್ನು ಜನರು ಕಡೆಗಣಿಸುತ್ತಾರೆ. ಮಕ್ಕಳಿರುವಾಗಲೇ ಅವುಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸಿದರೆ, ಸಮಸ್ಯೆ ನಿವಾರಸಿಬಹುದು. ಜನರು ಅದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.