ಚಿಕ್ಕಮಗಳೂರು: ರಸ್ತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ, ಅಪಘಾತಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಅಪಘಾತ ಹೆಚ್ಚಾಗಿ ಸಂಭವಿಸುತ್ತಿರುವ ಬ್ಲಾಕ್ ಸ್ಪಾಟ್ಗಳನ್ನು ಗುರುತಿಸಿ ಸರಿಪಡಿಸಲು ಪೊಲೀಸ್ ಇಲಾಖೆ ಪತ್ರ ಬರೆಯುತ್ತಲೇ ಇದೆ. ಹಲವು ಬ್ಲಾಕ್ ಸ್ಪಾಟ್ಗಳು ದುರಸ್ತಿಯಾಗಿದ್ದರೆ, ಇನ್ನೂ ಕೆಲವು ಹಾಗೇ ಉಳಿದುಕೊಂಡಿವೆ. ವರ್ಷದಲ್ಲಿ 150ಕ್ಕೂ ಹೆಚ್ಚು ಮಂದಿಯನ್ನು ಬಲಿ ಪಡೆಯುತ್ತಲೇ ಇವೆ.
ಅಪಘಾತ ಪ್ರಕರಣಗಳು ಅದರಲ್ಲೂ ಸಾವು ಸಂಭವಿಸಿರುವ ಅಪಘಾತ ಪ್ರಕರಣಗಳ ಸಂಖ್ಯೆಯನ್ನು ಗಮನಿಸಿದರೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಇವೆ. ಪ್ರತಿ ಪ್ರಕರಣದಲ್ಲಿ ಕನಿಷ್ಠ ಒಂದು ಸಾವು ಎಂದು ಅಂದಾಜಿಸಿದರೂ 165 ಮಂದಿ ಈ ವರ್ಷ(2023) ರಸ್ತೆಯಲ್ಲಿ ಪ್ರಾಣ ಬಿಟ್ಟಿದ್ದಾರೆ. ಬಹುತೇಕ ಪ್ರಕರಣಗಳಲ್ಲಿ ಸಾವಿನ ಸಂಖ್ಯೆ ಒಂದಿದ್ದರೆ, ಕೆಲವು ಪ್ರಕರಣಗಳಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ಮಂದಿ ಪ್ರಾಣ ಬಿಟ್ಟಿದ್ದಾರೆ. ಇದಲ್ಲದೇ ಸಾವು ಸಂಭವಿಸದೆ ಇರುವ ಅಪಘಾತಗಳು ಎರಡುಪಟ್ಟು ಇವೆ.
ಕಡೂರು–ಮೂಡಿಗೆರೆ–ಮಂಗಳೂರು, ತುಮಕೂರು–ಹೊನ್ನಾವರ, ಮಂಗಳೂರು–ಕಾರ್ಕಳ–ಶೃಂಗೇರಿ–ಕೊಪ್ಪ–ಶಿವಮೊಗ್ಗ ಸಂಪರ್ಕಿಸುವ ಮೂರು ರಾಷ್ಟ್ರೀಯ ಹೆದ್ದಾರಿಗಳು ಜಿಲ್ಲೆಯಲ್ಲಿ ಹಾದು ಹೋಗಿವೆ. ಬಹುತೇಕ ಅಪಘಾತಗಳು ರಾಷ್ಟ್ರೀಯ ಹೆದ್ದಾರಿಯಲ್ಲೇ ನಡೆದಿದ್ದು, ಅದರಲ್ಲೂ ಜಿಲ್ಲೆಯ ವ್ಯಾಪ್ತಿಯ ತುಮಕೂರು–ಹೊನ್ನಾವರ ರಾಷ್ಟ್ರೀಯ ಹೆದ್ದಾರಿಯಲ್ಲೆ ಹೆಚ್ಚು. ಜನವರಿಯಿಂದ ಈವರೆಗೆ 56 ಅಪಘಾತ ಪ್ರಕರಣಗಳು ಸಂಭವಿಸಿವೆ.
ಹೊಸದಾಗಿ ನಿರ್ಮಾಣವಾಗಿರುವ ಕಡೂರು–ಮೂಡಿಗೆರೆ–ಮಂಗಳೂರು ರಸ್ತೆಯಲ್ಲೂ ಹೆಚ್ಚಾಗಿ ಅಪಘಾತಗಳು ಸಂಭವಿಸುತ್ತಿವೆ. 2016ರಿಂದ 2018ರ ಅವಧಿಯಲ್ಲಿ 38 ಬ್ಲಾಕ್ಸ್ಪಾಟ್ಗಳನ್ನು ಪೊಲೀಸ್ ಇಲಾಖೆ ಗುರುತಿಸಿತ್ತು. ಅವುಗಳಲ್ಲಿ 33 ಬ್ಲಾಕ್ಸ್ಪಾಟ್ಗಳನ್ನು ಲೋಕೋಪಯೋಗಿ ಇಲಾಖೆ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಗಳು ಸರಿಪಡಿಸಿವೆ. ಕಡೂರು, ಬೀರೂರು ಮತ್ತು ಅಜ್ಜಂಪುರ ವ್ಯಾಪ್ತಿಯಲ್ಲಿ ತಲಾ ಎರಡು ಸ್ಥಳಗಳು ಇನ್ನೂ ಹಾಗೇ ಉಳಿದುಕೊಂಡಿವೆ.
2019ರಿಂದ 2021ರ ಅವಧಿಯಲ್ಲಿ ಮತ್ತೆ 22 ಸ್ಥಳಗಳನ್ನು ಪೊಲೀಸ್ ಇಲಾಖೆ ಬ್ಲಾಕ್ ಸ್ಪಾಟ್ಗಳು ಎಂದು ಗುರುತಿಸಿತು. ಅವುಗಳ ಪೈಕಿ 13 ಸ್ಥಳಗಳು ಸರಿಯಾಗಿದ್ದು, ಇನ್ನೂ 9 ಸ್ಥಳಗಳು ಹಾಗೇ ಉಳಿದುಕೊಂಡಿವೆ. ಈ ರೀತಿ ಆಗಾಗ ಪೊಲೀಸ್ ಇಲಾಖೆ ಬ್ಲಾಕ್ಸ್ಪಾಟ್ಗಳನ್ನು ಗುರುತಿಸುವ ಕೆಲಸ ಮಾಡುತ್ತಿದೆ. ಎರಡು ದಿನಗಳ ಹಿಂದೆ ಚಾರ್ಮಾಡಿ ಘಾಟಿಯಲ್ಲಿ ಸರಣಿ ಅಪಘಾತಗಳು ಸಂಭವಿಸಿದವು. ಅಲ್ಲಿ ತಡೆಗೋಡೆ ಹಳೆಯದಾಗಿದ್ದು, ಹೊಸದಾಗಿ ನಿರ್ಮಿಸುವ ಅಗತ್ಯವಿದೆ ಎಂದು ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಧಿಕಾರಿಗಳಿಗೆ ಪೊಲೀಸ್ ಇಲಾಖೆ ಪತ್ರ ಬರೆದಿದೆ.
ಪೂರಕ ಮಾಹಿತಿ: ಕೆ.ವಿ.ನಾಗರಾಜ್, ರವಿಕುಮಾರ್ ಶೆಟ್ಟಿಹಡ್ಲು, ಎಚ್.ಎಂ.ರಾಜಶೇಖರಯ್ಯ, ಬಾಲು ಮಚ್ಚೇರಿ, ಜೆ.ಒ.ಉಮೇಶ್ಕುಮಾರ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.